ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ: ವಿದ್ಯುತ್, ಇಂಟರ್‌ನೆಟ್ ತೆಗೆದ ಜೆಎನ್‌ಯು

ವಿದ್ಯುತ್, ಇಂಟರ್‌ನೆಟ್‌ ಸಂಪರ್ಕ ತೆಗೆದ ಜೆಎನ್‌ಯು
Last Updated 25 ಜನವರಿ 2023, 1:58 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಬಿಬಿಸಿಯ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾಲಯದ ಆಡಳಿತವು ತಡೆದಿದೆ. ವಿಶ್ವವಿದ್ಯಾಲಯ ದಲ್ಲಿ ವಿದ್ಯುತ್ ಮತ್ತು ಇಂಟರ್‌ನೆಟ್‌ ಸಂಪರ್ಕ ಕಡಿತ ಮಾಡುವ ಮೂಲಕ, ಪ್ರದರ್ಶನ ನಡೆಯದಂತೆ ಕ್ರಮ ತೆಗೆದುಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಗುಜರಾತಿನಲ್ಲಿ 2002ರಲ್ಲಿ ನಡೆದಿದ್ದ ಗೋಧ್ರಾ ಮತ್ತು ಗೋಧ್ರೋತ್ತರ ಹತ್ಯಾ ಕಾಂಡಗಳು ಹಾಗೂ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕ್ರಮಗಳ ಕುರಿತು ಬಿಬಿಸಿಯು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಪ್ರಸಾರ ಮಾಡಿದೆ. ಈ ಸಾಕ್ಷ್ಯಚಿತ್ರಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಈ ಸಾಕ್ಷ್ಯಚಿತ್ರದ ಲಿಂಕ್‌ಗಳು ಇರುವ ಟ್ವೀಟ್‌ ಮತ್ತು ವಿಡಿಯೊಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಹಲವು ಸಂಘಟನೆಗಳು ಸಿದ್ಧತೆ ನಡೆಸಿದ್ದವು.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯು ಮಂಗಳವಾರ ರಾತ್ರಿ 9ಕ್ಕೆ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸಾಕ್ಷ್ಯಚಿತ್ರ ವನ್ನು ಪ್ರದರ್ಶಿಸಬೇಡಿ. ಪ್ರದರ್ಶಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗೆ ಜೆಎನ್‌ಯು ಆಡಳಿತವು ಎಚ್ಚರಿಕೆ ನೀಡಿತ್ತು.

ಹೈದರಾಬಾದ್‌ ವಿ.ವಿಯಲ್ಲಿ ಪ್ರದರ್ಶನ

ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಹೈದರಾಬಾದ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಯೊಂದು ಪ್ರದರ್ಶಿಸಿದೆ. ಅನುಮತಿ ಪಡೆಯದೇ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಕುರಿತು ವಿಶ್ವವಿದ್ಯಾಲಯವು ಆಂತರಿಕ ವಿಚಾರಣೆ ಆರಂಭಿಸಿದೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳಲ್ಲಿ ಒಂದಾದ ‘ಫ್ರಟರ್ನಿಟಿ ಮೂವ್‌ಮೆಂಟ್’, ವಿಶ್ವವಿದ್ಯಾಲಯದ ವಾಣಿಜ್ಯ ಸಂಕೀರ್ಣದ ಬಳಿಯಲ್ಲಿ ಶನಿವಾರ ಸಂಜೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಈ ಬಗ್ಗೆ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಬಿವಿಪಿ) ಸದಸ್ಯರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್‌ಗೆ ಮಂಗಳವಾರ ದೂರು ನೀಡಿದ್ದರು. ಆನಂತರ ವಿಶ್ವವಿದ್ಯಾಲಯವು ಈ ಬಗ್ಗೆ ವಿಚಾರಣೆಗೆ ಆದೇಶಿಸಿದೆ ಎಂದು ಮೂಲಗಳು ಹೇಳಿವೆ.

ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿ ಸಂಘಟನೆಯು ವಿಶ್ವವಿದ್ಯಾಲಯದ ಅನುಮತಿ ಪಡೆದಿರಲಿಲ್ಲ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳಿವೆ ಎಂದು ಪಿಟಿಐ ವರದಿ ಮಾಡಿದೆ.

***

ಈ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿಲ್ಲ ಅಥವಾ ಈ ಸಂಬಂಧ ನಮಗೆ ಯಾವುದೇ ಅಧಿಕೃತ ಸುತ್ತೋಲೆ ಬಂದಿಲ್ಲ. ಪ್ರದರ್ಶನ ಕುರಿತು ವರದಿ ಬಂದ ನಂತರ ಕ್ರಮದ ಬಗ್ಗೆ ಯೋಚಿಸುತ್ತೇವೆ

– ಹೈದರಾಬಾದ್‌ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT