ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ನಾಲ್ವರು ಭಯೋತ್ಪಾದಕರು ಸಕ್ರಿಯವಾಗಿದ್ದು, ಅವರನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳು ಕಾರ್ಯನಿರತವಾಗಿವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಭದ್ರತಾ ಪಡೆಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದಐಜಿಪಿ (ಕಾಶ್ಮೀರ ವಲಯ) ವಿಜಯಕುಮಾರ್ ‘ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದರು.
‘ಕಳೆದ ವಾರ ಎರಡು ಗ್ರನೇಡ್ ದಾಳಿಗಳು ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಶ್ರೀನಗರದಲ್ಲಿ ನಾಲ್ವರು ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ನಾವು ಅವರನ್ನು ಬಂಧಿಸುತ್ತೇವೆ ಇಲ್ಲವೇ ಎನ್ಕೌಂಟರ್ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
‘ಕಳೆದ ವರ್ಷ ಹತನಾದ ದಿ ರೆಸಿಸ್ಟನ್ಸ್ ಫ್ರಂಟ್ನ ಮುಖ್ಯಸ್ಥನಾಗಿದ್ದ ಉಗ್ರ ಅಬ್ಬಾಸ್ ಶೇಖ್, ಸಾಯುವ ಮುನ್ನ ಶ್ರೀನಗರದಲ್ಲಿ ಏಳು ಭಯೋತ್ಪಾದಕರನ್ನು ಸಕ್ರಿಯಗೊಳಿಸಿದ್ದ. ಅದರಲ್ಲಿ ಸಾಕಿಬ್ ಮಂಜೂರ್ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.