ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ–ತುರಾಯಿ, ಸ್ಮರಣಿಕೆ ಬೇಡ, ಛತ್ರಿ ಕೊಡಿ ಎಂದ ಕೇರಳ ಸಂಸದ ರಹೀಮ್: ಕಾರಣವೇನು?

ಕೇರಳದ ರಾಜ್ಯಸಭಾ ಸಂಸದನ ಮಾದರಿ ನಡೆ
Last Updated 13 ಮೇ 2022, 7:41 IST
ಅಕ್ಷರ ಗಾತ್ರ

ತಿರುವನಂತಪುರ: ರಾಜಕಾರಣಿಗಳು ಚುನಾವಣೆಯಲ್ಲಿ ಆಯ್ಕೆಯಾದಾಗ ಅವರಿಗೆ ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆ, ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಸಾಮಾನ್ಯ. ಇಂಥ ಸಮಾರಂಭಗಳಲ್ಲಿ ಅವರಿಗೆ ಶಾಲು, ಹೂಗುಚ್ಛ, ಹಾರ–ತುರಾಯಿ, ಸ್ಮರಣಿಕೆ ನೀಡುವುದೂ ಸಹಜ. ಆದರೆ, ಸ್ಮರಣಿಕೆಗಳನ್ನು ನೀಡುವ ಬದಲು ನನಗೆ ಛತ್ರಿ ನೀಡಿ ಎಂದು ಕೇರಳದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಿಪಿಐ (ಸಂ) ಸಂಸದ ಎ.ಎ. ರಹೀಮ್ ಮನವಿ ಮಾಡಿದ್ದಾರೆ.

ರಹೀಮ್ ಅವರು ಇತ್ತೀಚೆಗೆ ರಾಜ್ಯಸಭೆ ಸಂಸದನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಹೀಮ್ ಮನವಿಗೆ ವ್ಯಾಪಕ ಸ್ಪಂದನೆ ದೊರೆತಿದ್ದು, ಕೇವಲ ಒಂದೇ ಕಾರ್ಯಕ್ರಮದಲ್ಲಿ ಅವರಿಗೆ 2000 ಛತ್ರಿಗಳು ದೊರೆತಿವೆ. ಈ ಛತ್ರಿಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ.

‘ಶುಭ ಹಾರೈಸುವವರು ಶಾಲುಗಳು,ಹೂಗುಚ್ಛ, ಹಾರ–ತುರಾಯಿ, ಸ್ಮರಣಿಕೆಗಳನ್ನು ನೀಡುತ್ತಾರೆ. ನಂತರ ಅವುಗಳು ಬಳಕೆಯಾಗುವುದಿಲ್ಲ. ಅವುಗಳು ಉಡುಗೊರೆಗಳಾಗಿರುವುದರಿಂದ ನಾಶಮಾಡಲೂ ಆಗುವುದಿಲ್ಲ. ಹೀಗಾಗಿ ಛತ್ರಿಯಂಥ ಬಳಕೆಯಾಗುವ ಸಾಧನಗಳನ್ನು ನೀಡಲು ಮನವಿ ಮಾಡಿದೆ. ಅವುಗಳನ್ನು ದುರ್ಬಲ ವರ್ಗದ ಮಕ್ಕಳಿಗೆ ನೀಡಬಹುದು’ ಎಂದು ರಹೀಮ್ ಹೇಳಿದ್ದಾರೆ. ಇವರು ಸಿಪಿಎಂನ ಯುವ ಘಟಕ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರೂ ಹೌದು.

ಇತ್ತೀಚೆಗೆ ರಹೀಮ್ ಅವರ ತವರು ಗ್ರಾಮ, ತಿರುವನಂತಪುರದ ಮನಿಕ್ಕಲ್‌ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರಿಗೆ ಸ್ಮರಣಿಕೆ ಬದಲಿಗೆ 2,000 ಛತ್ರಿಗಳು ದೊರೆತಿವೆ. ಜನರು ಸಾಲಾಗಿ ಅವರ ಬಳಿ ತೆರಳಿ ಛತ್ರಿ ನೀಡುತ್ತಿರುವುದು ಕಂಡುಬಂದಿದೆ.

ಎಲ್ಲ ಛತ್ರಿಗಳನ್ನು ದುರ್ಬಲ ವರ್ಗದವರ ಮಕ್ಕಳಿಗೆ ಶಾಲಾರಂಭಕ್ಕೂ ಮುನ್ನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT