ನವದೆಹಲಿ: ಕೇರಳದ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಿರುವ ಸುಗ್ರೀವಾಜ್ಞೆ ಕುರಿತು ಮರುಪರಿಶೀಲನೆ ನಡೆಯಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋಮವಾರ ತಿಳಿಸಿದ್ದಾರೆ.
ತಿದ್ದುಪಡಿ ಸುಗ್ರೀವಾಜ್ಞೆಯು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಈ ಹೇಳಿಕೆ ಹೊರಬಿದ್ದಿದೆ. ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಹೆಚ್ಚವರಿಯಾಗಿ ಸೆಕ್ಷನ್ 118–ಎ ಸೇರ್ಪಡೆಗೊಳಿಸಲು ಕೇರಳ ಸಚಿವ ಸಂಪುಟ ಕಳೆದ ತಿಂಗಳು ತೀರ್ಮಾನಿಸಿತ್ತು.
ಈ ತಿದ್ದುಪಡಿ ಅನುಸಾರ, ವ್ಯಕ್ತಿಗೆ ಅವಮಾನಿಸುವ ಉದ್ದೇಶದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಸಾಬೀತಾದಲ್ಲಿ ಐದು ವರ್ಷದವರೆಗೂ ಸಜೆ, ₹ 10 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ಅವಕಾಶವಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರವು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಕುಗ್ಗಲಿವೆ ಎಂದು ಪ್ರತಿಪಾದಿಸಿತ್ತು.
ಸುಗ್ರೀವಾಜ್ಞೆ ಪರಿಶೀಲಿಸಲಾಗುವುದು ಎಂದು ಯೆಚೂರಿ ತಿಳಿಸಿದರು. ಅಂದರೆ ಅದರ ಪರಿಣಾಮ ಕುಗ್ಗಿಸುವುದೇ ಎಂಬ ಪ್ರಶ್ನೆಗೆ, ‘ಅದನ್ನು ಕೈಬಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು. ಸಿಪಿಐ ಮತ್ತು ಸಿಪಿಎಂ ಎರಡೂ ಈ ಕುರಿತು ಇಂಗಿತವನ್ನು ನೀಡಿವೆ.