ಗುವಾಹಟಿ: ಕಳೆದ ತಿಂಗಳು ಅಪಹರಿಸಲಾಗಿದ್ದ ಒಎನ್ಜಿಸಿ ಸಿಬ್ಬಂದಿ ರಿತುಲ್ ಸೈಕಿಯಾ ಅವರನ್ನು ಉಲ್ಫಾ(ಸ್ವತಂತ್ರ) ಉಗ್ರ ಸಂಘಟನೆ ಶನಿವಾರ ಬಿಡುಗಡೆ ಮಾಡಿದೆ.
ಸೈಕಿಯಾ ಅವರನ್ನು ನಾಗಾಲ್ಯಾಂಡ್ನ ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ.
ರಿತುಲ್ ಸೈಕಿಯಾ ಅವರನ್ನು ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ ಜಿಲ್ಲೆಯ ಲಕ್ವಾ ತೈಲಕ್ಷೇತ್ರದಿಂದ ಶಂಕಿತ ಉಲ್ಫಾ ಉಗ್ರರು ಏಪ್ರಿಲ್ 21ರಂದು ಅಪಹರಿಸಿದ್ದರು.
ಸೈಕಿಯಾ ಅವರ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ, ‘ಎಲ್ಲರ ಸಹಕಾರದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿಯ ಜೊತೆಗೆ ಶಾಂತಿ ನೆಲೆಸುವಂತೆ ಮಾಡುವ ಭರವಸೆ ಇದೆ’ ಎಂದು ಹೇಳಿದರು.