ಹೈದರಾಬಾದ್: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದ್ದ ವಕೀಲ ದಂಪತಿಯ ಕೊಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿರುವ ತೆಲಂಗಾಣ ಹೈಕೋರ್ಟ್, ಈ ಕುರಿತು ಸಮರ್ಪಕ ಮತ್ತು ತ್ವರಿತಗತಿಯಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
ಹೈಕೋರ್ಟ್ನ ವಕೀಲ ದಂಪತಿಗಳಾದ ಗತ್ತುವಾಮನ್ ರಾವ್ ಮತ್ತು ಪಿ.ವಿ.ನಾಗಮಣಿ ಅವರು ಕಾರಿನಲ್ಲಿ ಪ್ರಯಾಣಿಸುವಾಗ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಚಾಕು ಮತ್ತು ಇತರೆ ಮಾರಕಾಸ್ತ್ರಗಳನ್ನು ಬಳಸಿ ದುಷ್ಕರ್ಮಿಗಳು ರಾಮಗಿರಿ ಮಂಡಲ್ ಬಳಿ ಕೃತ್ಯ ಎಸಗಿದ್ದರು.
ವಿಚಾರಣೆಯನ್ನು ಮಾರ್ಚ್ 1ಕ್ಕೆ ನಿಗದಿಪಡಿಸಿದ ಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ತನಿಖೆಯ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲು ಸೂಚಿಸಿತು. ದಂಪತಿ ಕೊಲೆ ಖಂಡಿಸಿ ವಕೀಲರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದು, ದುಷ್ಕರ್ಮಿಗಳ ತ್ವರಿತ ಬಂಧನಕ್ಕೆ ಆಗ್ರಹಪಡಿಸಿದ್ದರು.
ಕೃತ್ಯವನ್ನು ಖಂಡಿಸಿದ್ದ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಯ್ಲಿ ಅವರು, ಸಾಕ್ಷ್ಯ ಸಂಗ್ರಹ ಚುರುಕಾಗಿ ತನಿಖೆ ನಡೆಸಬೇಕು. ಯಾವುದೇ ವಿಳಂಬ ಆಗಬಾರದು ಎಂದೂ ಸೂಚಿಸಿದರು.