ನವದೆಹಲಿ: ‘ಸಾವಿರಾರು ಹೂವುಗಳು ಅರಳಲಿ. ಯಾವುದೇ ಮೂಲಗಳಿಂದ ಚಿಂತನೆಗಳು ಮೂಡಿಬರಲಿ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಕೋವಿಡ್–19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(ಪಿಐಎಲ್) ಸಂಬಂಧಿಸಿದಂತೆ ನ್ಯಾಯಾಲಯ ಈ ಪ್ರತಿಕ್ರಿಯೆ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಂ ನಾಥ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಕೋವಿಡ್–19 ಲಸಿಕೆಯನ್ನು ಉಚಿತವಾಗಿ ಇಡೀ ದೇಶದಾದ್ಯಂತ ಏಕರೂಪ ಮಾದರಿಯಲ್ಲಿ ನೀಡಬೇಕು ಹಾಗೂ ವೈರಸ್ ಹಬ್ಬದಂತೆ ಕ್ರಮಕೈಗೊಳ್ಳಲು ಸಲಹೆ ನೀಡಲು ಸಾಂಕ್ರಾಮಿಕ ಮತ್ತು ವೈರಾಣು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಎಸ್ಡಿಪಿಐ ಪಿಐಎಲ್ ಸಲ್ಲಿಸಿತ್ತು. ಪೀಠವು ಈ ಪಿಐಎಲ್ ಅನ್ನು ತಿರಸ್ಕರಿಸಿತು.
‘ಕೋವಿಡ್ ಸಿದ್ಧತೆ ಬಗ್ಗೆ ಈಗಾಗಲೇ ನಾವು ಆದೇಶಗಳನ್ನು ನೀಡಿದ್ದೇವೆ. ಈ ವಿಷಯದಲ್ಲಿ ನೀವು ಮಧ್ಯಪ್ರವೇಶಿಸಬಹುದು ಮತ್ತು ಸಲಹೆಗಳನ್ನು ನೀಡಬಹುದು’ ಎಂದು ಪೀಠವು ಹೇಳಿದೆ.
‘ಸಾವಿರಾರು ಹೂವುಗಳು ಅರಳಲಿ. ಯಾವುದೇ ಮೂಲಗಳಿಂದ ಚಿಂತನೆಗಳು ಮೂಡಿಬರಲಿ ಎಂದು ಜಗತ್ತಿನ ರಾಜಕೀಯ ಇತಿಹಾಸದಲ್ಲಿ ಹೇಳಿರಬಹುದು. ಆದರೂ, ಈ ವಿಷಯದಲ್ಲೂ ಉಲ್ಲೇಖಿಸಬಹುದು’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟರು.