ನಾಗ್ಪುರ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆಯುಲೋಕಾಯುಕ್ತ ಮಸೂದೆ 2022 ಅನ್ನು ಬುಧವಾರ ಅಂಗೀಕರಿಸಿತು. ಈ ಮಸೂದೆಯ ಮೂಲಕ ಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರನ್ನು ಭ್ರಷ್ಟಾಚಾರ ತಡೆ ಒಂಬುಡ್ಸ್ಮೆನ್ ವ್ಯಾಪ್ತಿಯೊಳಗೆ ತರಲಾಗಿದೆ.
ಶಿಕ್ಷಕ ಪ್ರವೇಶ ಪರೀಕ್ಷೆ ಹಗರಣ ಸಂಬಂಧ ವಿರೋಧ ಪಕ್ಷಗಳು ಸದನದಿಂದ ಹೊರನಡೆದಿದ್ದರಿಂದ ಚರ್ಚೆ ನಡೆಸದೆಯೇ ಮಸೂದೆಯನ್ನು ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಬೇಕು ಎಂದಾದರೆ, ಅಧಿವೇಶನದಲ್ಲಿ ಮುಖ್ಯಮಂತ್ರಿ ವಿರುದ್ಧ ಆರೋಪಗಳನ್ನು ಮಂಡಿಸಬೇಕಾಗುತ್ತದೆ. ಮೂರನೇ ಒಂದು ಭಾಗದಷ್ಟು ಶಾಸಕರು ಒಪ್ಪಿಗೆ ನೀಡಿದರೆ ಮಾತ್ರವೇ ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸಬಹುದಾಗಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
‘ಇದೊಂದು ಐತಿಹಾಸಿಕ ಮಸೂದೆಯಾಗಿದೆ. ಇಂಥ ಕಾನೂನು ತರುತ್ತಿರುವ ಮೊದಲ ರಾಜ್ಯ ನಮ್ಮದು’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.