'ನೀಟ್' ಪರೀಕ್ಷೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಬುಡಕಟ್ಟು ವಿದ್ಯಾರ್ಥಿಗಳ ಸಾಧನೆ

ನಾಗ್ಪುರ್: ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ (ನೀಟ್) ಮಹಾರಾಷ್ಟ್ರದ ನಕ್ಸಲ್ ಪೀಡಿತ ಪ್ರದೇಶದ ಇಬ್ಬರು ಬುಡಕಟ್ಟು ವಿದ್ಯಾರ್ಥಿಗಳು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಗಢ್ಚಿರೋಲಿ ಜಿಲ್ಲೆಯ ಭಮ್ರಾಗಢ್ ತಾಲೂಕಿನ ನಾಗರಗುಂದ್ ಗ್ರಾಮದ ಸೂರಜ್ ಪುಂಗಟಿ (19) ಹಾಗೂ ಅಮರಾವತಿ ಜಿಲ್ಲೆಯ ಧರಣಿ ತಾಲೂಕಿನ ಘೋಟಾ ಗ್ರಾಮದ ಸಾವನ್ ಶಿಲಾಸ್ಕರ್ ಎಂಬ ಇಬ್ಬರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಎಂಬಿಬಿಎಸ್ ಕೋರ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಈ ಇಬ್ಬರೂ ಯುವಕರು ‘ಮರಿಯಾ ಗೋಂಡ್’ ಎಂಬ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಸಣ್ಣ ಕೃಷಿಕ ಕುಟುಂಬದಿಂದ ಬಂದ ಸೂರಜ್ ಪುಂಗಟಿ ಭಮ್ರಾಗಢ್ ತಾಲೂಕಿನಲ್ಲೇ ಮೊದಲ ಬಾರಿಗೆ ವೈದ್ಯಕೀಯ ಕೋರ್ಸ್ಗೆ ಸೇರುತ್ತಿರುವ ವಿದ್ಯಾರ್ಥಿ ಎಂಬ ಹಿರಿಮೆ ಗಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಸೂರಜ್ ಪುಂಗಟಿ 720 ಕ್ಕೆ 328 ಅಂಕಗಳನ್ನು ಪಡೆದರೆ, ಸಾವನ್ ಶಿಲಾಸ್ಕರ್ 720 ಕ್ಕೆ 294 ಅಂಕಗಳನ್ನು ಪಡೆದಿದ್ದಾರೆ.
ಬೋರ್ಡ್ ಪರೀಕ್ಷೆಯಲ್ಲಿ ಈ ಇಬ್ಬರೂ ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುಣೆಯ ಬಿಜೆ ಮೆಡಿಕಲ್ ಕಾಲೇಜಿನ ಹಳೇ ವಿದ್ಯಾರ್ಥಿಗಳು ಸ್ಥಾಪಿಸಿರುವ ‘ಲಿಫ್ಟ್ ಫಾರ್ ಅಫ್ಲಿಫ್ಟ್ಮೆಂಟ್’ (ಎಲ್ಎಫ್ಯು) ಎಂಬ ಎನ್ಜಿಒ ನೀಟ್ ಪರೀಕ್ಷೆಗೆ ಉಚಿತ ತರಬೇತಿ ನೀಡಿತ್ತು.
ಈ ಇಬ್ಬರೂ ವಿದ್ಯಾರ್ಥಿಗಳು ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಿಂದ ಬಂದವರಾಗಿದ್ದರು ಎಂದು ಎಲ್ಎಫ್ಯು ಸಂಸ್ಥಾಪಕ ಕೇತನ್ ದೇಶಮುಖ್ ಹೇಳಿದ್ದಾರೆ.
ಇದನ್ನೂ ಓದಿ: ಸಿಬಿಎಸ್ಇ: ಬದಲಾದ ಮೌಲ್ಯಮಾಪನಕ್ಕೆ ಪೂರಕವಾಗಿರಲಿ ವಿದ್ಯಾರ್ಥಿಗಳ ಸಿದ್ಧತೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.