ನವದೆಹಲಿ: ಕೋವಿಡ್–19 ಪಿಡುಗನ್ನು ಸಮರ್ಥವಾಗಿ ಎದುರಿಸಬೇಕು ಎಂದಾದರೆ, ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಚುರುಕುಗೊಳಿಸುವುದು ಅಗತ್ಯ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.
ದೇಶದಲ್ಲಿ ಕೋವಿಡ್–19 ಪಿಡುಗಿನಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಅವರು ಪತ್ರ ಬರೆದಿದ್ದಾರೆ.
ಕೋವಿಡ್ ಪಿಡುಗಿನ ವಿರುದ್ಧದ ಹೋರಾಟ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬೆನ್ನಲ್ಲೇ, ಡಾ.ಸಿಂಗ್ ಈ ಪತ್ರ ಬರೆದಿದ್ದಾರೆ.
‘ಎಷ್ಟು ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂಬುದು ಮುಖ್ಯವಲ್ಲ. ದೇಶದ ಒಟ್ಟು ಜನಸಂಖ್ಯೆ ಪೈಕಿ ಎಷ್ಟು ಪ್ರಮಾಣದ ಜನರಿಗೆ ನೀಡಲಾಗಿದೆ ಎಂಬುದರತ್ತ ಗಮನ ಹರಿಸಬೇಕು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ದೇಶದ ಜನಸಂಖ್ಯೆಯಲ್ಲಿ ಲಸಿಕೆ ನೀಡಲಾದ ಜನರ ಪ್ರಮಾಣ ಅತ್ಯಂತ ಕಡಿಮೆ ಇದೆ. ಹೀಗಾಗಿ ಸರಿಯಾದ ನೀತಿ ನಿರೂಪಣೆ, ಅನುಷ್ಠಾನದ ಮೂಲಕ ಈ ನಿಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗುವುದು’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ಲಸಿಕೆಯ ಎಷ್ಟು ಡೋಸ್ಗಳ ಖರೀದಿಗೆ ಆದೇಶಿಸಲಾಗಿದೆ, ಈ ವರೆಗೆ ಎಷ್ಟು ಡೋಸ್ಗಳನ್ನು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಬೇಕು’ ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.