ಬೆಂಗಳೂರು: ‘ಅವರು ಮುತ್ತುರಾಜ. ಅವರ ಬಗ್ಗೆ ಮಾತಾಡಲ್ಲ. ನಮ್ಮನೆ ಪಕ್ಕದ ಮುತ್ತುರಾಜ್ ಅಲ್ಲ. ಅವರು ಬೇರೆ ಮುತ್ತುರಾಜ’ ಎಂದು ತಮ್ಮ ಬಗ್ಗೆ ವ್ಯಂಗ್ಯವಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕ ರೇಣುಕಾಚಾರ್ಯ ಅವರು ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.
‘ಅತಿಯಾಗಿ 'ಲಕ್ಷ್ಮೀ' ವರಿಸಲು ಹೋಗಿ ತಿಹಾರ್ ಜೈಲಿಗೆ ಹೋದವರಿಗೆ ನನ್ನ ಬಗ್ಗೆ ಮಾತನಾಡವ ನೈತಿಕತೆ ಇಲ್ಲ’ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ಅತಿಯಾಗಿ 'ಲಕ್ಷ್ಮೀ' ವರಿಸಲು ಹೋಗಿ ತಿಹಾರ್ ಜೈಲಿಗೆ ಹೋದವರಿಗೆ ನನ್ನ ಬಗ್ಗೆ ಮಾತನಾಡವ ನೈತಿಕತೆ ಇಲ್ಲ..!
ಗಾಜಿನ ಮನೆಯಲ್ಲಿದ್ದೀರಿ ಡಿಕೆಶಿ ಹುಶಾರ್...! ಮಾತು ನಿಮ್ಮೊಬ್ಬರ ಸ್ವತ್ತಲ್ಲ.
ಅಲ್ಲದೇ, ‘ಗಾಜಿನ ಮನೆಯಲ್ಲಿದ್ದೀರಿ ಡಿಕೆಶಿ, ಹುಶಾರ್’ ಎಂದು ಎಚ್ಚರಿಸಿರುವ ರೇಣುಕಾಚಾರ್ಯ, ‘ಮಾತು ನಿಮ್ಮೊಬ್ಬರ ಸ್ವತ್ತಲ್ಲ’ ಎಂದೂ ಹೇಳಿದ್ದಾರೆ.
'ಬಿಕಿನಿ ಅಥವಾ ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕು' ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಯನ್ನು ವಿರೋಧಿಸಿದ್ದ ರೇಣುಕಾಚಾರ್ಯ ‘ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು. ಯಾಕೆಂದರೆ ಮಹಿಳೆಯರು ಧರಿಸುವ ಉಡುಪುಗಳನ್ನು ನೋಡಿ ಪುರುಷರು ಉದ್ರೇಕಗೊಳ್ಳುತ್ತಾರೆ. ಅದರಿಂದ ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತವೆ’ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸುವ ವೇಳೆ ಡಿಕೆಶಿ, ರೇಣುಕಾಚಾರ್ಯ ಅವರನ್ನು ‘ಮುತ್ತುರಾಜ’ ಎಂದಿದ್ದರು.