ನವದೆಹಲಿ: ಎಎಪಿಯ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ರನ್ನು ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇನ್ನೂ 9 ದಿನ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮನವಿ ಮಾಡಿದೆ.
ಹುಸೇನ್ ವಿರುದ್ಧ ವಂಚನೆ, ಫೋರ್ಜರಿ, ಅಪರಾಧ ಸಂಚು ಪ್ರಕರಣಗಳನ್ನೂ ಇ.ಡಿ. ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಹುಸೇನ್ರನ್ನು ಈ ಹಿಂದೆ 6 ದಿನಗಳ ಕಾಲ ಇ.ಡಿ. ವಶಕ್ಕೊಪ್ಪಿಸಲಾಗಿತ್ತು.
ಇ.ಡಿ. ಮನವಿಯ ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷೆನ್ಸ್ ಜಡ್ಜ್ ಅಮಿತಾಭ್ ರಾವತ್ ಅವರು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ. ಹುಸೇನ್ರನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರುವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವೂ ಹುಸೇನ್ ಮೇಲಿದೆ. ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿಯೂ ಪ್ರಮುಖ ಆರೋಪಿಯಾಗಿದ್ದಾರೆ.