ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಸಂಚುಕೋರ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡುವವರಿಗೆ ಕೇಂದ್ರ ಸರ್ಕಾರವು ₹ 2 ಕೋಟಿ ಬಹುಮಾನ ಘೋಷಿಸಬೇಕು ಎಂದು ಸಿಧು ಅವರ ತಂದೆ ಬಲ್ ಕೌರ್ಸಿಂಗ್ ಗುರುವಾರ ಆಗ್ರಹಿಸಿದ್ದಾರೆ.
‘ಈ ಮೊತ್ತವನ್ನು ಸರ್ಕಾರಕ್ಕೆ ನೀಡಲು ಸಾಧ್ಯವಾಗದಿದ್ದರೆ ನಾನೇ ಆ ಹಣವನ್ನು ನೀಡುತ್ತೇನೆ’ ಎಂದೂ ಅವರು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದ ಭಾರತ ಮೂಲದ ವ್ಯಕ್ತಿಯ ಪತ್ತೆಗಾಗಿ ಆಸ್ಟ್ರೇಲಿಯಾ ಪೊಲೀಸರು ನಗದು ಬಹುಮಾನ ಘೋಷಿಸಿದ್ದನ್ನೂ ಅವರು ಉದಾಹರಿಸಿದ್ದಾರೆ.
ಗೋಲ್ಡಿ ಬ್ರಾರ್ನನ್ನು ಭಾರತಕ್ಕೆ ಕರೆ ತರಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಪಂಜಾಬ್ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಲಾರೆನ್ಸ್ ಬಿಷ್ಣೋಯ್ ತಂಡದ ಬ್ರಾರ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದ.