ಪನ್ನಾ: ಇದು ಇಬ್ಬರು ಕಾರ್ಮಿಕರು ತಮ್ಮ ಜಮೀನನನ್ನು ಅಗೆಯುತ್ತಾ, ಒಂದೇ ದಿನದಲ್ಲಿ ಲಕ್ಷಾಧೀಶ್ವರರಾದ ಕಥೆ.
ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಎರಡು ಹಳ್ಳಿಗಳಲ್ಲಿ.
ದಿಲೀಪ್ ಮಿಸ್ತ್ರಿಗೆ ಜಾರುಪುರದಲ್ಲಿರುವ ಜಮೀನನ್ನು ಅಗೆಯುತ್ತಿದ್ದಾಗ 7.44 ಕ್ಯಾರೆಟ್ ತೂಕದ ಕಲ್ಲು ಸಿಕ್ಕಿದೆ. ಲಖನ್ ಯಾದವ್ಗೆ ಕೃಷ್ಣಕಲ್ಯಾಣಪುರದಲ್ಲಿ ಭೂಮಿ ಅಗೆಯುತ್ತಿದ್ದಾಗ 14.98 ಕ್ಯಾರೆಟ್ ತೂಕದ ಕಲ್ಲು ಸಿಕ್ಕಿದೆ.
ಇವು ‘ಡೈಮಂಡ್ ಕಲ್ಲುಗಳು‘ ಎಂದು ವಜ್ರವನ್ನು ಪರಿಶೀಲಿಸುವ ಡೈಮಂಡ್ ಇನ್ಸ್ಪೆಕ್ಟರ್ ಅನುಪಮ್ ಸಿಂಗ್ ಯಾದವ್ ಖಚಿಪಡಿಸಿದ್ದಾರೆ. ಈ ಎರಡೂ ಕಲ್ಲನ್ನು ಡೈಮಂಡ್ ಕಚೇರಿಯಲ್ಲಿ ಇರಿಸಿದ್ದಾರೆ. ನಂತರ ಇವುಗಳನ್ನು ಹರಾಜು ಹಾಕುತ್ತಾರೆ. ಬಂದ ಹಣದಲ್ಲಿ ಶೇ 12.5ರಷ್ಟನ್ನು ರಾಯಧನವಾಗಿ ಹಿಡಿದುಕೊಂಡು, ಉಳಿದಿದ್ದನ್ನು ಸಂಬಂಧಿಸಿದ ಕಾರ್ಮಿಕರಿಗೆ ಕೊಡುತ್ತಾರೆ ಎಂದು ಡೈಮಂಡ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಲ್ಲುಗಳು ಎಷ್ಟು ಬೆಲೆ ಬಾಳಬಹುದು ಎಂಬುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ. 7.44 ಕ್ಯಾರೆಟ್ ತೂಗುವ ಕಲ್ಲಿನ ಬೆಲೆ ಸುಮಾರು ₹30 ಲಕ್ಷ ಆಗಬಹುದು. ಈ ಕಲ್ಲಿನ ಎರಡರಷ್ಟು ತೂಗುವ ಕಲ್ಲಿನ ಬೆಲೆ, ಇದರ ದುಪ್ಪಟ್ಟಾ ಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಜಮೀನಿನಿಂದ ವಜ್ರದ ಕಲ್ಲುಗಳನ್ನು ತೆಗೆದ ಕಾರ್ಮಿಕರು ಸಿಕ್ಕಾಪಟ್ಟೆ ಥ್ರಿಲ್ ಆಗಿಬಿಟ್ಟಿದ್ದಾರೆ.
ಈ ಕಾರ್ಮಿಕರಲ್ಲಿ ಲಖನ್ ಯಾದವ್ಗೆ ಎರಡು ಎಕರೆ ಜಮೀನು ಇದೆ. ಅವರು ಇದೇ ಮೊದಲ ಬಾರಿಗೆ ಡೈಮಂಡ್ ಕಲ್ಲು ತೆಗೆದಿದ್ದಾರೆ. ‘ಈ ಕಲ್ಲು ಹರಾಜಿನಿಂದ ಬಂದ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತೇನೆ‘ ಎಂದು ಯಾದವ್ ಹೇಳಿದ್ದಾರೆ.
ದಿಲೀಪ್ ಮಿಸ್ತ್ರಿ ‘ನಾನು ನಾಲ್ವರು ವ್ಯಕ್ತಿಗಳು ಸೇರಿ, ಕಳೆದ ಆರು ತಿಂಗಳಿಂದ ನಮ್ಮ ಖಾಸಗಿ ಭೂಮಿಯಲ್ಲಿ ವಜ್ರಗಳನ್ನು ತೆಗೆಯಲು ಶ್ರಮಿಸುತ್ತಿದ್ದೇವೆ. ದೇವರ ಅನುಗ್ರಹದಿಂದ, ಮೊದಲ ಬಾರಿಗೆ ಉತ್ತಮ ಗುಣಮಟ್ಟದ ವಜ್ರವನ್ನು ಪಡೆದುಕೊಂಡಿದ್ದೇನೆ‘ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಬುಂದೇಲ್ಖಂಡ್ನ ಹಿಂದುಳಿದ ಪ್ರದೇಶದಲ್ಲಿ ನೆಲೆಗೊಂಡಿರುವ ಪನ್ನಾ ಜಿಲ್ಲೆ, ವಜ್ರ ಗಣಿಗಾರಿಕೆಗೆ ಬಹಳ ಹೆಸರುವಾಸಿಯಾಗಿದೆ.