ನವದೆಹಲಿ: ಚೀನಾದೊಂದಿಗೆ ಕೇಂದ್ರ ಸರ್ಕಾರ ನಡೆಸಿರುವ ಮಾತುಕತೆ ‘ವ್ಯರ್ಥ’ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಪೂರ್ವ ಲಡಾಖ್ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ಡೆಪಸಾಂಗ್ ಪ್ರದೇಶಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿರುವ ಕುರಿತು ವರದಿಗಳು ಪ್ರಕಟವಾಗಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘ಗೊಗ್ರಾ-ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಭೂ ಪ್ರದೇಶಗಳಲ್ಲಿ ಚೀನಾ ಆಕ್ರಮಣ ಮುಂದುವರಿದಿದೆ. ಇದು ಡಿಬಿಒ ವಾಯುನೆಲೆ ಸೇರಿದಂತೆ ಭಾರತದ ರಕ್ಷಣಾ ಕಾರ್ಯತಂತ್ರದ ಹಿತಾಸಕ್ತಿಗೆ ಎದುರಾದ ನೇರ ಅಪಾಯವಾಗಿದೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೂರ್ವ ಲಡಾಖ್ನ ಇತರ ಪ್ರದೇಶಗಳಲ್ಲಿ ನಡೆದಿರುವ ಸಂಘರ್ಷವನ್ನು ತಡೆಯವಲ್ಲಿ ಚೀನಾದೊಂದಿಗೆ ನಡೆದ ಮಾತುಕತೆಗಳು ಏಕೆ ‘ಫಲಿತಾಂಶ ನೀಡಿಲ್ಲ‘ ಎಂದು ಕಾಂಗ್ರೆಸ್ ಪಕ್ಷ ಭಾನುವಾರ ಪ್ರಶ್ನಿಸಿತ್ತು.