ಶ್ರೀನಗರ: ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆ ಮಾಲೀಕರ ಒಡೆತನದ ಟ್ರಸ್ಟ್ ಸೇರಿದಂತೆ ಇಲ್ಲಿನ ಒಂಬತ್ತು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ದಾಳಿ ನಡೆಸಿದೆ.
ಶ್ರೀನಗರದಲ್ಲಿ ಸ್ಥಳೀಯ ಪೊಲೀಸ್ ಮತ್ತು ಅರೆ ಸೇನಾಪಡೆಯ ನೆರವಿನೊಂದಿಗೆ ಬುಧವಾರ ಬೆಳಿಗ್ಗೆ ಶೋಧ ಕಾರ್ಯಚರಣೆ ನಡೆಸಲಾಗಿದೆ. ಪ್ರಮುಖ ಇಂಗ್ಲಿಷ್ ಪತ್ರಿಕೆ ಕಚೇರಿಯ ಆವರಣದಲ್ಲಿದ್ದ ಟ್ರಸ್ಟ್ನ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
2000ನೇ ಇಸವಿಯಲ್ಲಿ ಸ್ಥಾಪಿಸಲಾದ ಕನಿಷ್ಠ ಮೂರು ಸರ್ಕಾರೇತರ ಸಂಸ್ಥೆಗಳ ಮೇಲೆಯೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದರು. ಈ ಸರ್ಕಾರೇತರ ಸಂಸ್ಥೆಗಳು ಹೆಸರು ಬಹಿರಂಗಪಡಿಸದ ದಾನಿಗಳಿಂದ ಹಣ ಪಡೆಯುತ್ತಿದ್ದವು. ಈ ಹಣವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಎನ್ಎಎ ಮೂಲಗಳು ತಿಳಿಸಿವೆ.