ನವದೆಹಲಿ: ಇಲ್ಲಿನ ‘24, ಅಕ್ಬರ್ ರಸ್ತೆ’ಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಲಾಠಿಚಾರ್ಜ್ ಮಾಡಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.
‘ಇದು ಸುಳ್ಳು ಸುದ್ದಿ. ಅಂಥ ಯಾವುದೇ ಘಟನೆ ಸಂಭವಿಸಿಲ್ಲ’ ಎಂದು ಡಿಸಿಪಿ ಅಮೃತ ಗುಗುಲೋಥ್ ಹೇಳಿದ್ದಾರೆ. ಪೊಲೀಸ್ ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೂಡಾ ಸಹ ದೆಹಲಿ ಪೊಲೀಸರ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
‘ಕಾಂಗ್ರೆಸ್ ಪ್ರಧಾನ ಕಚೇರಿ ಹೊರಗೆ ಕೆಲವು ವ್ಯಕ್ತಿಗಳು ಪೊಲೀಸರತ್ತ ಬ್ಯಾರಿಕೇಡ್ಗಳನ್ನು ಎಸೆದರು. ಆಗ ಸಣ್ಣಮಟ್ಟಿನ ಘರ್ಷಣೆ ನಡೆಯಿತು. ಪೊಲೀಸರು ಎಐಸಿಸಿ ಕಚೇರಿ ಒಳಗೆ ನುಗ್ಗಿದ್ದಾರೆ, ಲಾಠಿಚಾರ್ಜ್ ಮಾಡಿದ್ದಾರೆ ಎಂಬುದೆಲ್ಲ ಸುಳ್ಳು’ ಎಂದು ವಿಶೇಷ ಆಯುಕ್ತರು ಹೇಳಿದ್ದಾರೆ.
‘ಇಂದು (ಬುಧವಾರ) ದೆಹಲಿ ಪೊಲೀಸರು ಬಲವಂತವಾಗಿ ಎಐಸಿಸಿ ಪ್ರಧಾನ ಕಚೇರಿ ಒಳಕ್ಕೆ ನುಗ್ಗಿದ್ದಾರೆ. ಕಚೇರಿಯ ಬಾಗಿಲನ್ನು ಒಡೆದು ಒಳನುಗ್ಗಿರುವ ಅವರು ನಮ್ಮ ಪೂರ್ವಜರು ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿರುವ ಪ್ರಜಾಪ್ರಭುತ್ವವನ್ನು ತುಳಿದಿದ್ದಾರೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದರು.