ನವದೆಹಲಿ: ‘ಭಾರತದ ಆಂತರಿಕ ವಿಚಾರಗಳಲ್ಲಿ ಹೊರಗಿನ ವಕ್ತಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ‘ ಎಂದು ಮಧ್ಯಪ್ರದೇಶ ಮೂಲದ ರೈತ ಸಂಘಟನೆಯ ಮುಖಂಡ ಶಿವಕುಮಾರ್ ಕಕ್ಕಾಜಿ ಹೇಳಿದ್ದಾರೆ.
ನೂತನ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬೆಂಬಲಿಸಿರುವ ವಿಚಾರ ಕುರಿತು ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.
ದೆಹಲಿ ಸಮೀಪದ ಶಿಂಘು ಗಡಿಯಲ್ಲಿ ವಿವಿಧ ರೈತ ಸಂಘಟನೆಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಜಸ್ಟಿನ್ ಟ್ರುಡೊ ಅವರು ‘ನಾವು ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ. ಹಕ್ಕುಗಳಿಗಾಗಿ ನಡೆಯುವ ಶಾಂತಿಯುತ ಹೋರಾಟವನ್ನು ಕೆನಡಾ ಸದಾ ಬೆಂಬಲಿಸುತ್ತದೆ‘ ಎಂದು ಹೇಳಿಕೆ ನೀಡಿದ್ದರು.
'ಕೆನಡಾ ಪ್ರಧಾನಿಯವರ ಬೆಂಬಲವನ್ನು ಸ್ವಾಗತಿಸುತ್ತೇವೆ. ನಮ್ಮ ರೈತರ ಬಗ್ಗೆ ಅವರು ತೋರುವ ಕಾಳಜಿಯನ್ನು ಗೌರವಿಸುತ್ತೇವೆ. ಆದರೆ, ಹೊರಗಿನ ವ್ಯಕ್ತಿಗಳು ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ‘ ಎಂದು ಶಿವಕುಮಾರ್ ಹೇಳಿದ್ದಾರೆ.
ಟ್ರುಡೊ ಹೇಳಿಕೆಗೆ ಕೇಂದ್ರ ಸರ್ಕಾರ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ದೇಶದ ಆಂತರಿಕ ವಿಚಾರವಾಗಿ ಕೆನಡಾ ಪ್ರಧಾನಿಯವರ ಹೇಳಿಕೆ, ಅನಗತ್ಯ ಹಾಗೂ ಅನಪೇಕ್ಷಿತ ಎಂದು ಇಲ್ಲಿನ ನಾಯಕರು ಪ್ರತಿಕ್ರಿಯಿಸಿದ್ದರು.