ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.
ಉಕ್ರೇನ್ ವಿದ್ಯಮಾನಗಳ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ‘ಭಾರತದ ಪ್ರದೇಶವನ್ನು ಸ್ವಲ್ಪ–ಸ್ವಲ್ಪವಾಗಿ ಚೀನಾಕ್ಕೆ ಬಿಟ್ಟು ಕೊಡಲಾಗುತ್ತಿದೆ’ ಎಂದು ಬಿಎಸ್ಪಿ ಸಂಸದ ಶ್ಯಾಮಸಿಂಗ್ ಯಾದವ್ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಸಚಿವ ರಿಜಿಜು, ‘ಕೆಲ ಪ್ರದೇಶಗಳು ಈಗಲೂ ಚೀನಾ ಹಾಗೂ ಪಾಕಿಸ್ತಾನದ ವಶದಲ್ಲಿವೆ. ಈ ಪ್ರದೇಶಗಳು ಅತಿಕ್ರಮಣಗೊಳ್ಳಲು ಕಾರಣರಾದವರ ಹೆಸರುಗಳನ್ನು ಪ್ರಸ್ತಾಪಿಸುವುದಿಲ್ಲ. ಆದರೆ, ಮೋದಿ ಅವರು ಪ್ರಧಾನಿಯಾದ ನಂತರ ಒಂದು ಇಂಚೂ ಪ್ರದೇಶವನ್ನು ಸಹ ಬಿಟ್ಟುಕೊಟ್ಟಿಲ್ಲ’ ಎಂದು ತಿರುಗೇಟು ನೀಡಿದರು.
ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲಪ್ರದೇಶ ಶೇ 100ರಷ್ಟು ಸುರಕ್ಷಿತ ಹಾಗೂ ಭದ್ರವಾಗಿದೆ ಎಂದರು.