ನವದೆಹಲಿ: ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು ಕಠಿಣ ಪರಿಶ್ರಮ ಪಡುತ್ತಿದ್ದು, ಒಂದು ವೇಳೆ ಲಸಿಕೆ ಯಶಸ್ವಿಯಾದಲ್ಲಿ ಮೊಟ್ಟಮೊದಲು ‘ಕೋವಿಡ್–19 ಯೋಧ’ರಿಗೆ ಇದನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ರಾಜ್ಯ ಖಾತೆ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಶನಿವಾರ ತಿಳಿಸಿದರು.
ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯನ್ನು ಅನಾವರಣಗೊಳಿಸಿದ್ದು, ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ’ ಎಂದರು.
‘ನಮ್ಮ ವಿಜ್ಞಾನಿಗಳು ಕೋವಿಡ್ಗೆ ಲಸಿಕೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಮೂರು ಸಂಭಾವ್ಯ ಲಸಿಕೆಗಳು ಪರೀಕ್ಷೆಯ ವಿವಿಧ ಹಂತಗಳಲ್ಲಿ ಇವೆ. ಇದರಲ್ಲಿ ಯಶಸ್ಸು ಕಂಡರೆ, ಕೋವಿಡ್ ಯೋಧರಿಗೆ ಮೊದಲು ಇದನ್ನು ನೀಡಲಾಗುವುದು’ ಎಂದರು.