ತಿರುವನಂತಪುರ (ಪಿಟಿಐ): ಮಾವೆಲಿಕ್ಕರದ ಕಳಿಕ್ಕಲ್ ಮದಮ್ನ ಎನ್.ಪರಮೇಶ್ವರನ್ ನಂಬೂದರಿ ಅವರನ್ನು ನವೆಂಬರ್ 16 ರಿಂದ ಒಂದು ವರ್ಷದ ಅವಧಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಂದಿನ ಮೇಲ್ಸಂತಿ (ಮುಖ್ಯ ಅರ್ಚಕ) ಆಗಿ ಆಯ್ಕೆ ಮಾಡಲಾಗಿದೆ.
ಭಾನುವಾರ ಬೆಳಿಗ್ಗೆ ಸೋಪಾನಮ್ ದೇವಾಲಯದಲ್ಲಿ ಡ್ರಾ ಮೂಲಕ ಮುಖ್ಯ ಅರ್ಚಕರ ಆಯ್ಕೆ ನಡೆಯಿತು ಎಂದು ತಿರುವಾಂಕೂರು ದೇವಸ್ಥಾನಂ ಮಂಡಳಿ (ಟಿಡಿಬಿ) ಹೇಳಿದೆ.
ಮಾಲಿಕಪ್ಪುರಂ ದೇವಿ ದೇವಸ್ಥಾನಕ್ಕೆ ಪ್ರಧಾನ ಅರ್ಚಕರಾಗಿ ಕುರುವಕ್ಕಡ್ ಇಲ್ಲಂನ ಶಾಭು ನಂಬೂದರಿ ಅವರನ್ನು ಆರಿಸಲಾಗಿದೆ. ದೇಗುಲವನ್ನು ನಿರ್ವಹಿಸುವ ಟಿಡಿಬಿ ನಡೆಸಿದ ಸಂದರ್ಶನದ ಬಳಿಕ ಪುರೋಹಿತರ ಹೆಸರುಗಳನ್ನು ಚೀಟಿಯಲ್ಲಿ ಬರೆದು ನಂತರದಲ್ಲಿ ಅದರಲ್ಲಿ ಆಯ್ಕೆ ಮಾಡಲಾಗಿದೆ.
ರಾಜಮನೆತನದ ಅತ್ಯಂತ ಕಿರಿಯ ಸದಸ್ಯ ಗೋವಿಂದ ವರ್ಮ ಅವರು ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಎಂದು ಟಿಡಿಬಿ ಹೇಳಿದೆ.
ಈ ಮಧ್ಯೆ ಭಾರಿ ಮಳೆಯ ಕಾರಣ ಶಬರಿಮಲೆ, ಪಂಬಾ ಪ್ರದೇಶ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ಧಾರ್ಮಿಕಯಾತ್ರೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ಹೇಳಿದ್ದಾರೆ.