ಮುಂಬೈ: ಎಂಟು ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಮಂಗಳವಾರ ಒಂದು ದಿನದ ಉಪವಾಸವನ್ನು ಆಚರಿಸುತ್ತಿದ್ದೇನೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಪವಾರ್, ರಾಜ್ಯಸಭಾಸದಸ್ಯರನ್ನು ಅಮಾನತು ಮಾಡಿದ ಸಭಾಪತಿ ವೆಂಕಯ್ಯ ನಾಯ್ಡು ಅವರ ನಡವಳಿಕೆಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ, ಸದನದಲ್ಲಿ ಮೋದಿ ಸರ್ಕಾರ ವಿರೋಧ ಪಕ್ಷಗಳ ಸೊಲ್ಲಡಗಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಎಂಟು ಸಂಸದರನ್ನು ಹೊರಹಾಕಲಾಗಿದೆ. ಉಪಾಧ್ಯಕ್ಷರು ಸದನದ ನಿಯಮಗಳಿಗೆ ಆದ್ಯತೆ ನೀಡಿಲ್ಲ ಎಂದೂ ಪವಾರ್ ಹೇಳಿದರು.
ಕೃಷಿ ಮಸೂದೆ ಅಂಗೀಕಾರದ ವೇಳೆ ಉಪ ಸಭಾಪತಿ ಅವರೊಂದಿಗೆ ಉದ್ಧಟತನದಿಂದ ವರ್ತಿಸಿದ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿ ಮಾಡಿದ ಕಾರಣಕ್ಕಾಗಿ ಟಿಎಂಸಿಯ ಡೆರಿಕ್ ಒಬ್ರೆಯನ್ ಸೇರಿದಂತೆ 8 ಸದಸ್ಯರನ್ನು ಅಧಿವೇಶನದ ಉಳಿದ ಅವಧಿಯ ವರೆಗೆ ಅಮಾನತುಗೊಳಿಸಲಾಗಿದೆ.