ನವದೆಹಲಿ: ಪಿಎಂ-ಕೇರ್ಸ್ ನಿಧಿಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಕೋವಿಡ್–19 ನಿಯಂತ್ರಣಕ್ಕೆ ಮತ್ತು ಇತರ ಯೋಜನೆಗಳಿಗೆ ಈ ನಿಧಿಯಿಂದ ಯಾವ ರೀತಿಯಲ್ಲಿ ಹಣವನ್ನು ಹಂಚಿಕೆ ಮಾಡಲಾಗಿದೆ ಎನ್ನುವ ವಿವರಗಳನ್ನು ನೀಡುವಂತೆ ಕೋರಲಾಗಿದೆ.
ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಈ ಅರ್ಜಿ ಸಲ್ಲಿಸಿದ್ದಾರೆ.
‘ಇದುವರೆಗೆ ಪಿಎಂ ಕೇರ್ಸ್ ನಿಧಿಯ ಬಗ್ಗೆ ಪ್ರಧಾನಮಂತ್ರಿ ಕಚೇರಿ ನೀಡುವ ಪತ್ರಿಕಾ ಪ್ರಕಟಣೆಗಳಿಂದ ಮಾತ್ರ ಮಾಹಿತಿ ದೊರೆಯುತ್ತಿದೆ. ಹೀಗಾಗಿ, ಪ್ರಸ್ತುತ ಸ್ಥಿತಿಯ ಬಗ್ಗೆ ವಿವರಗಳನ್ನು ಒದಗಿಸಬೇಕು’ ಎಂದು ಅರ್ಜಿಯಲ್ಲಿ ಗೋಖಲೆ ಕೋರಿದ್ದಾರೆ.
‘ಕೋವಿಡ್–19 ಲಸಿಕೆ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಈ ಮೊದಲು ಹೇಳಿತ್ತು. ಆದರೆ, ಲಸಿಕೆ ಅಭಿವೃದ್ಧಿಗೆ ಪಿಎಂ ಕೇರ್ಸ್ ನಿಧಿ ಮೂಲಕ ಸುಮಾರು ₹100 ಕೋಟಿ ನೀಡಲಾಗಿದೆ. ಇದೇ ಉದ್ದೇಶಕ್ಕಾಗಿ ಹೆಚ್ಚುವರಿ ನಿಧಿಯನ್ನು ನೀಡಲಾಗಿದೆಯೇ ಎನ್ನುವುದು ಸಹ ಸ್ಪಷ್ಟವಾಗಿಲ್ಲ’ ಎಂದು ವಿವರಿಸಿದ್ದಾರೆ.