ಮಥುರಾ: ಇಲ್ಲಿನ ಶ್ರೀಕೃಷ್ಣನ ಜನ್ಮಭೂಮಿ ಬಳಿ ಇರುವ17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಹೊಸ ಅರ್ಜಿಯ ಬಗ್ಗೆ ತಮ್ಮ ನಿಲುವು ಪ್ರಕಟಿಸುವಂತೆ ಮಥುರಾ ನ್ಯಾಯಾಲಯವು ಶಾಹಿ ಈದ್ಗಾ ಆಡಳಿತ ಮಂಡಳಿ ಹಾಗೂ ಇತರ ಮೂವರಿಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.
ಈ ಮೊಕದ್ದಮೆಯ ಇತ್ಯರ್ಥಕ್ಕೆ ಹೆಚ್ಚು ವಿವರವಾದ ವಿಚಾರಣೆ ಅಗತ್ಯ ಎಂದು ತಿಳಿಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ದೇವ್ ಕಾಂತ್ ಶುಕ್ಲಾ ನೋಟಿಸ್ ಜಾರಿ ಮಾಡಿದರು ಎಂದು ಜಿಲ್ಲಾ ಸರ್ಕಾರಿ ವಕೀಲ ಸಂಜಯ್ ಗೌರ್ ತಿಳಿಸಿದ್ದಾರೆ.
ಕೃಷ್ಣ ದೇಗುಲದ ಆವರಣದಲ್ಲಿರುವ 13.7 ಏಕರೆ ಜಮೀನನ್ನು ಮರಳಿ ನೀಡುವಂತೆ ಕೋರಿ ಈ ಹೊಸ ಅರ್ಜಿಯನ್ನು ಅರ್ಚಕ ಪವನ್ಕುಮಾರ್ ಶಾಸ್ತ್ರಿಯವರು ಸಲ್ಲಿಸಿದ್ದಾರೆ.