ಹಲ್ದಿಯಾ (ಪ.ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಕೇಂದ್ರ ಯೋಜನೆಗಳ ಪೋಸ್ಟರ್ಗಳಲ್ಲಿ ತಮ್ಮ ಫೋಟೊಗಳನ್ನು ಲಗತ್ತಿಸುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಹಲವು ಯೋಜನೆಗಳ ಹೆಸರು ಬದಲಾಯಿಸಿ ದೀದಿ ಅವುಗಳನ್ನು ತಮ್ಮ ಯೋಜನೆಗಳೆಂದು ಸುಳ್ಳು ಹೇಳಿಕೊಂಡು ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.
ಅದೇ ಹೊತ್ತಿಗೆ ತಾಯಂದಿರು ಹಾಗೂ ಜನಸಾಮಾನ್ಯರ ಮೇಲೆ ಹಿಂಸಾಚಾರವನ್ನು ಮಾಡುತ್ತಿರುವ 'ಇಂತಹ ಮಗಳಿಗೆ' ರಾಜ್ಯದ ಜನತೆಯು ಮತ ಚಲಾಯಿಸುತ್ತಾರೆಯೇ ಎಂದು ಪ್ರಶ್ನಿಸಿದರು.
80 ವರ್ಷದ ತಾಯಿಯ ಮೇಲೆ ಹಿಂಸಾಚಾರ ಮಾಡುವ 'ಇಂತಹ ಮಗಳಿಗೆ' ಜನರು ಮತ ಚಲಾಯಿಸುತ್ತಾರೆಯೇ? ಬಿಜೆಪಿ ಕಾರ್ಯಕರ್ತರನ್ನು ಗಲ್ಲಿಗೇರಿಸುವ 'ಇಂತಹ ಮಗಳಿಗೆ' ನೀವು ಮತ ಹಾಕುವೀರಾ? ರಾಜ್ಯದ ಜನರು ನಿಜವಾದ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಅಭಿಯಾನದ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಎಂಸಿ ಸರ್ಕಾರದ ಕೆಟ್ಟ ರಾಜನೀತಿಯಿಂದಾಗಿ ಪಿಎಂ-ಕಿಸಾನ್ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನಗಳು ಪಶ್ಚಿಮ ಬಂಗಾಳ ಜನರನ್ನು ತಲುಪಿಲ್ಲ ಎಂದು ಟೀಕಿಸಿದರು.
ಜನ ಸಾಮಾನ್ಯರ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ದುಡಿಯುತ್ತಿದ್ದಾರೆ. ಇನ್ನೊಂದೆಡೆ ಫೋಟೊ ಕ್ಲಿಕ್ಲಿಸುವಲ್ಲಿ ತಲ್ಲೀನವಾಗಿರುವ ದೀದಿ, ಹಲವಾರು ಕೇಂದ್ರ ಯೋಜನೆಗಳ ಶ್ರೇಯಸ್ಸು ಪಡೆಯುವಲ್ಲಿ ನಿರತವಾಗಿದ್ದಾರೆ ಎಂದು ಆರೋಪಿಸಿದರು.