ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಯು (ಆಡಿಯೊ ಕ್ಲಿಪ್) ಶನಿವಾರ ಸಾಕಷ್ಟು ವಿವಾದ ಹುಟ್ಟುಹಾಕಿದೆ.
‘ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಜನಪ್ರಿಯತೆ ಇದೆ’ ಎಂಬುದಾಗಿ ಕಿಶೋರ್ ಹೇಳಿದ್ದಾರೆ ಎನ್ನಲಾಗಿದೆ.
ಕೆಲವು ಪತ್ರಕರ್ತರೊಂದಿಗೆ ಕಿಶೋರ್ ಅವರು ‘ಕ್ಲಬ್ಹೌಸ್’ ಆ್ಯಪ್ನಲ್ಲಿ ನಡೆಸಿದ್ದಾರೆ ಎನ್ನಲಾದ ಸಂವಾದದ ಆಯ್ದ ಭಾಗಗಳನ್ನು ಹಂಚಿಕೊಂಡಿರುವ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ‘ಟಿಎಂಸಿ ಚುನಾವಣೆ ಕತೆ ಮುಗಿಯಿತು’ ಎಂದಿದ್ದಾರೆ.
‘ಕ್ಲಬ್ಹೌಸ್ನಲ್ಲಿ ನಾನು ನಡೆಸಿದ್ದೇನೆ ಎನ್ನಲಾದ ಸಂವಾದದ ಪೂರ್ಣಪಾಠವನ್ನು ಬಹಿರಂಗಪಡಿಸಿ’ ಎಂದು ಸವಾಲು ಹಾಕಿರುವಪ್ರಶಾಂತ್ ಕಿಶೋರ್, ಈ ಚುನಾವಣೆಯಲ್ಲಿ ಬಿಜೆಪಿ 100 ಸೀಟುಗಳನ್ನೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
‘ಬಂಗಾಳದಲ್ಲಿ ಟಿಎಂಸಿಗೆ ಆಡಳಿತ ವಿರೋಧಿ ಅಲೆ ಇದೆ. ಟಿಎಂಸಿ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಪರಿಶಿಷ್ಟ ಜಾತಿ ಹಾಗೂ ಮಥುಆ ಸಮುದಾಯದವರು ಬಿಜೆಪಿಗೆ ಮತಹಾಕುತ್ತಿದ್ದಾರೆ ಎಂದು ಮಮತಾ ಅವರ ಚುನಾವಣಾ ತಂತ್ರಜ್ಞರೇ ಒಪ್ಪಿಕೊಂಡಿದ್ದಾರೆ’ ಎಂದು ಧ್ವನಿಮುದ್ರಿಕೆ ಬಿಡುಗಡೆ ಬಳಿಕ ಮಾಳವೀಯ ಹೇಳಿದರು.
‘ಬಿಜೆಪಿಯು ತನ್ನ ನಾಯಕರ ಮಾತುಗಳಿಗಿಂತ ನನ್ನ ಮಾತಿಗೇ ಹೆಚ್ಚು ಮಹತ್ವ ಕೊಡುತ್ತಿರುವುದು ಅಚ್ಚರಿ. ಸಂವಹನದ ಆಯ್ದ ಭಾಗ ಪ್ರಕಟಿಸಿ ಖುಷಿಪಡುವ ಬದಲು ಸಂಪೂರ್ಣ ಆಡಿಯೊವನ್ನು ಬಿಡುಗಡೆ ಮಾಡುವ ಛಾತಿ ತೋರಿಸಲಿ’ ಎಂದು ಕಿಶೋರ್ ಹೇಳಿದ್ದಾರೆ.