ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನೀತಿ, ಜನರ ಜೀವನ ಬದಲಾವಣೆಗೆ ಮಾಧ್ಯಮ ನಿರ್ಣಾಯಕ: ಮೋದಿ

'ಮಾತೃಭೂಮಿ' ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ
Last Updated 18 ಮಾರ್ಚ್ 2022, 21:41 IST
ಅಕ್ಷರ ಗಾತ್ರ

ಕಲ್ಲಿಕೋಟೆ: ಸರ್ಕಾರದ ನೀತಿಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮಾಧ್ಯಮ ರಚನಾತ್ಮಕ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

'ಮಾತೃಭೂಮಿ' ಪತ್ರಿಕೆಯ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ವರ್ಚುವಲ್‌ ರೂಪದಲ್ಲಿ ನೆರವೇರಿಸಿ ಮಾತನಾಡಿದ ಅವರು ಬೇಟಿ ಬಚಾವೊ, ಬೇಟಿ ಪಢಾವೊ, ಸ್ವಚ್ಛ ಭಾರತ ಮಿಷನ್ ಸೇರಿದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇನ್ನಿತರ ಯೋಜನೆಗಳನ್ನು ಜನಪ್ರಿಯಗೊಳಿಸುವಲ್ಲಿ ಮಾಧ್ಯಮಗಳು ನಿರ್ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಗ ಸೇರಿ ಇನ್ನಿತರ ಕಾರ್ಯ ಚಟುವಟಿಕೆಗಳು ಮಾಧ್ಯಮಗಳಿಂದ ಜನಪ್ರಿಯವಾಗಿವೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟ ಮತ್ತು ಈವರೆಗೆ ಬೆಳಕಿಗೆ ಬಾರದ ಸ್ವಾತಂತ್ರ್ಯಯೋಧರನ್ನು ಬೆಳಕಿಗೆ ತರುವ ಕೆಲಸವನ್ನು ಸಂವಿಧಾನದ 4ನೇ ಅಂಗವಾಗಿರುವ ಮಾಧ್ಯಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವುದೇ ದೇಶದ ಅಭಿವೃದ್ಧಿಗೆ ಉತ್ತಮ ನೀತಿಗಳನ್ನು ರೂಪಿಸಬೇಕು ಎಂಬುದು ಒಂದು ಕಡೆಯಾದರೆ, ನೀತಿಗಳ ಯಶಸ್ವಿ ಮತ್ತು ದೊಡ್ಡ ಮಟ್ಟದ ರೂಪಾಂತರಕ್ಕೆ ಸಮಾಜದ ಎಲ್ಲಾ ಹಂತಗಳ ಭಾಗವಹಿಸುವಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರ ವಹಿಸುತ್ತದೆ. ಮಾಧ್ಯಮಗಳು ರಚನಾತ್ಮಕ ಪರಿಣಾಮ ಬೀರುವುದನ್ನು ನಾನು ಕಂಡಿದ್ದೇವೆ ಎಂದು ಪ್ರಧಾನಿ ಹೇಳಿದರು.

ಇದೇ ರೀತಿ ದೇಶದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಹಲವು ಗ್ರಾಮಗಳು ಮತ್ತು ಪಟ್ಟಣಗಳಿವೆ. ಅವುಗಳ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ. ಈ ಸ್ಥಳಗಳ ಬಗ್ಗೆ ಮಾಹಿತಿಗಳನ್ನು ಪಸರಿಸುವ ಮೂಲಕ ಇಂಥ ಸ್ಥಳಗಳಿಗೆ ಹೆಚ್ಚು ಜನರು ಭೇಟಿ ನೀಡುವಂತೆ ಉತ್ತೇಜಿಸಬೇಕಿದೆ. ಮಾಧ್ಯಮ ಕ್ಷೇತ್ರದ ಹೊರತಾದ ಬರಹಗಾರರಿಗೂ ಪ್ರೋತ್ಸಾಹಿಸಿ, ವೇದಿಕೆ ಕಲ್ಪಿಸಬೇಕು ಎಂಬ ಸಂದೇಶ ನೀಡಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಮಾತೃಭೂಮಿ ಕೊಡುಗೆ
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ 'ಮಾತೃಭೂಮಿ' ಪತ್ರಿಕೆ ನೀಡಿದ ಕೊಡುಗೆಗಳ ಬಗ್ಗೆ ಪ್ರಧಾನಿ ಮೋದಿ ಅವರು ಮೆಲುಕು ಹಾಕಿದರು. ಮಹಾತ್ಮ ಗಾಂಧೀಜಿ ಅವರ ಆದರ್ಶಗಳಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಲು ಮಾತೃಭೂಮಿ ಪತ್ರಿಕೆ ಹುಟ್ಟಿಕೊಂಡಿತು. ಅಲ್ಲದೆ ಕೆ.ಪಿ ಕೇಶವ ಮೆನನ್, ಕೆ.ಎ. ದಾಮೋದರ ಮೆನನ್, ಕೇರಳದ ಗಾಂಧಿ ಕೆ. ಕೇಳಪ್ಪನ್ ಹಾಗೂ ಕುರೂ ನೀಲಕಂಠನ್ ನಂಬೂದಿರಿಪಾಡ್‌ ಸೇರಿದಂತೆ ಇತರರ ಹೆಸರುಗಳನ್ನು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT