ಗುವಾಹಟಿ: ಅಸ್ಸಾಂ ಸರ್ಕಾರವು 1 ಲಕ್ಷಕ್ಕೂ ಅಧಿಕ ಮಂದಿಗೆ ಭೂಮಿಯ ಪಟ್ಟಾ ನೀಡಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಶನಿವಾರ ಚಾಲನೆ ನೀಡುವರು.
ಸ್ವಾತಂತ್ರ್ಯ ನಂತರ ಅಸ್ಸಾಂನಲ್ಲಿ ಏಕ ಕಾಲದಲ್ಲಿ ಇಷ್ಟೊಂದು ಮಂದಿಗೆ ಭೂಮಿಯ ಪಟ್ಟಾ ನೀಡುತ್ತಿರುವುದು ಇದೇ ಮೊದಲು.
‘ಸ್ಥಳೀಯರು ದಶಕಗಳಿಂದಲೂ ಅನಿಶ್ಚಿತ ಜೀವನ ನಡೆಸುತ್ತಿದ್ದರು. ಅಂತಹವರಿಗೆ ಭೂಮಿ ಮಂಜೂರು ಮಾಡಲಾಗುವುದು. ಇದೊಂದು ಜನಸ್ನೇಹಿ ಕಾರ್ಯಕ್ರಮ’ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲಾ ತಿಳಿಸಿದ್ದಾರೆ.
‘ಅಕ್ರಮ ವಲಸಿಗರು ಸರ್ಕಾರಿ ಭೂಮಿ ಹಾಗೂ ಬುಡಕಟ್ಟು ಜನಾಂಗದವರಿಗೆ ಸೇರಿದ ಜಾಗ ಅತಿಕ್ರಮಿಸಿದ್ದಾರೆ. ಅಂತಹವರಿಂದ ಭೂಮಿ ವಶಕ್ಕೆ ಪಡೆದು ಅದನ್ನು ಬುಡಕಟ್ಟು ಜನರು, ಇತರೆ ಹಿಂದುಳಿದ ವರ್ಗದವರು (ಒಬಿಸಿ) ಮತ್ತು ಕಾಫಿ ತೋಟಗಳ ಕಾರ್ಮಿಕರಿಗೆ ನೀಡಲು ಸರ್ಕಾರವು ಮುಂದಾಗಿದೆ’ ಎಂದು ಹೇಳಿದ್ದಾರೆ.