ಹೈದರಾಬಾದ್: ಒಂದು ತಿಂಗಳೊಳಗೆ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಮನೋರೋಗದಿಂದ (ಸೈಕೋ) ಬಳಲುತ್ತಿದ್ದು, ಆತ ಸಂತ್ರಸ್ತರ ದೇಹದೊಂದಿಗೆ ಸ್ವಾಭಾವಿಕವಲ್ಲದ ಲೈಂಗಿಕತೆಯಲ್ಲಿ ತೊಡಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅವನು ವಿಕೃತ, ಸಮಾಜಕ್ಕೆ ಅಪಾಯಕಾರಿ. ನಾವು ವಿಧಿವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಸಂಗ್ರಹಿಸಿದ್ದೇವೆ. ಆರೋಪಿ ಜಾಮೀನಿನ ಮೇಲೆ ಬರುವುದಿಲ್ಲ ಮತ್ತು ಹೆಚ್ಚಿನ ಜನರಿಗೆ ಅಪಾಯವನ್ನುಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು 90 ದಿನಗಳ ಮೊದಲು ನಿಖರವಾದ ಚಾರ್ಜ್ಶೀಟ್ ಸಲ್ಲಿಸುತ್ತೇವೆ. ಅಪರಾಧದ ವಿಚಾರಣೆಯು ಆತ ಜೈಲಿನಲ್ಲಿದ್ದಾಗಲೇ ನಡೆಯಬೇಕು ಎಂದು ಗುಂಟೂರು ಪೊಲೀಸ್ ಮುಖ್ಯಸ್ಥ ಅಮ್ಮಿ ರೆಡ್ಡಿ ತಿಳಿಸಿದ್ದಾರೆ.
ಗುಂಟೂರು ಜಿಲ್ಲೆಯ ತಾಡೆಪಲ್ಲಿಯ ನೆರೆಯ ಗ್ರಾಮಗಳಾದ ಮೆಲ್ಲಂಪುಡಿ ಮತ್ತು ವಡೇಶ್ವರಂನಲ್ಲಿ ಈ ಘಟನೆ ನಡೆದಿದೆ.
ಈ ವಾರ, ಮೆಲ್ಲಂಪುಡಿಯಿಂದ ನಾಪತ್ತೆಯಾಗಿ ಎರಡು ದಿನದ ಬಳಿಕ ಆರು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಮಾರ್ಚ್ 14 ರಂದು ತಮ್ಮ ಮನೆಯ ಹೊರಗೆ ಆಟವಾಡುತ್ತಿತ್ತ ಆತ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದನು. ಕೊಲೆಗಾರನನ್ನು ಹುಡುಕಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು.
ನಂತರ, ಬಾಲಕನ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ, ಮಗುವಿನ ಹತ್ಯೆಯ ಹಿಂದೆ 19 ವರ್ಷದ ಗೋಪಿ ಭಾಗಿಯಾಗಿರುವ ಶಂಕೆಯಿದೆ ಎಂದು ತಿಳಿಸಿದ್ದರು.
ಆರೋಪಿ 14 ವರ್ಷದವನಿದ್ದಾಗಲೇ ಲೈಂಗಿಕ ದೌರ್ಜನ್ಯ ನಡೆಸಿ ಸ್ನೇಹಿತನೊಬ್ಬನನ್ನು ಕೊಂದು ಶವವನ್ನು ಬಕಿಂಗ್ಹ್ಯಾಂ ಕಾಲುವೆಯಲ್ಲಿ ಎಸೆದಿದ್ದಾನೆ ಎಂಬ ವದಂತಿಯಿದೆ. ದೂರು ದಾಖಲಾದರೆ ಆರೋಪಿಯ ಭವಿಷ್ಯ ನಾಶವಾಗಲಿದೆ ಎಂದು ಆತನ ತಂದೆಯು ಗ್ರಾಮಸ್ಥರಲ್ಲಿ ಮನವರಿಕೆ ಮಾಡಿದ್ದರಿಂದಾಗಿ ಆ ಸಮಯದಲ್ಲಿ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆರೋಪಿಯ ತಂದೆ ಕೂಡ ಕ್ರಿಮಿನಲ್ ಆಗಿದ್ದು, ಅವರ ಮೊದಲ ಹೆಂಡತಿಯನ್ನು ಕೊಲೆ ಮಾಡಿದ್ದಕ್ಕಾಗಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.