ಅಮೃತಸರ: ಹಲವು ವರ್ಷಗಳ ಬಳಿಕ ಪಂಜಾಬ್ ಜನತೆಯು ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆಯಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ಪಂಜಾಬ್ನ ನಿಯೋಜಿತ ಮುಖ್ಯಮಂತ್ರಿ ಭಗವಂತ ಮಾನ್ ಅವರ ಜೊತೆಯಲ್ಲಿ ರೋಡ್ ಶೋದಲ್ಲಿ ಭಾಗವಹಿಸಿದ ಕೇಜ್ರಿವಾಲ್, ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಎಎಪಿ, 92 ಸ್ಥಾನಗಳನ್ನು ಗಳಿಸಿತ್ತು.
'ಹಲವು ವರ್ಷಗಳ ನಂತರ, ಪಂಜಾಬ್ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆಯಲಿರುವುದು ನನಗೆ ಖುಷಿ ತಂದಿದೆ. ಅವರು (ಮಾನ್) ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಪಂಜಾಬ್ನಲ್ಲಿ ಪ್ರಾಮಾಣಿಕ ಸರ್ಕಾರ ರಚನೆಯಾಗುತ್ತದೆ' ಎಂದು ಹೇಳಿದರು.
'ನಾವು ಪಂಜಾಬ್ ಜನತೆಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಪ್ರತಿ ರೂಪಾಯಿಯೂಜನರ ಕ್ಷೇಮಕ್ಕಾಗಿ ವ್ಯಯವಾಗಲಿದೆ' ಎಂದು ಹೇಳಿದರು.
ಎಎಪಿಯ ಯಾವುದೇ ಶಾಸಕ ತಪ್ಪು ಎಸಗಿದರೆ ಜೈಲಿಗೆ ರವಾನಿಸಲಾಗುತ್ತದೆ ಎಂದು ಎಚ್ಚರಿಸಿದರು.
ನಿಯೋಜಿತ ಮುಖ್ಯಮಂತ್ರಿ ಭಗವಂತ ಮಾನ್, ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ರಾಜ್ಯದ ಪ್ರತಿಯೊಬ್ಬ ನಾಗರಿಕನೂ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.