ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಐತಿಹಾಸಿಕ ಕುಸಿತಕ್ಕೆ ಜಿಎಸ್‌ಟಿ ಕಾರಣ: ರಾಹುಲ್ ಗಾಂಧಿ

Last Updated 6 ಸೆಪ್ಟೆಂಬರ್ 2020, 7:11 IST
ಅಕ್ಷರ ಗಾತ್ರ

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ‘ಗಬ್ಬರ್ ಸಿಂಗ್ ಟ್ಯಾಕ್ಸ್‌’ (ಸರಕು ಮತ್ತು ಸೇವಾ ತೆರಿಗೆ/ಜಿಎಸ್‌ಟಿ) ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು, ‘ಮೋದಿ ಸರ್ಕಾರವು ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ಮೂರನೇ ವಿಡಿಯೊದಲ್ಲಿ ಅವರು ಪ್ರಸ್ತಾಪಿಸಿದ್ದಾರೆ. ಜಿಎಸ್‌ಟಿ ಎಂಬುದು ತೆರಿಗೆ ವ್ಯವಸ್ಥೆಯಲ್ಲ, ಬಡವರ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.

‘ಜಿಎಸ್‌ಟಿಯು ಲಕ್ಷಾಂತರ ಸಣ್ಣ ಉದ್ಯಮಗಳನ್ನು, ಉದ್ಯೋಗಗಳನ್ನು ಕಸಿದುಕೊಂಡಿದೆ. ಯುವಕರ ಮತ್ತು ರಾಜ್ಯಗಳ ಆರ್ಥಿಕತೆಯ ಭವಿಷ್ಯವನ್ನು ನಾಶ ಮಾಡಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ –23.9ಕ್ಕೆ ಇಳಿಕೆಯಾಗಿದೆ. ಈ ಕುರಿತು ವಿಡಿಯೊದಲ್ಲಿ ವಿವರಣೆ ನೀಡಿರುವ ರಾಹುಲ್ ಗಾಂಧಿ, ಜಿಎಸ್‌ಟಿಯು ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ಎರಡನೇ ದಾಳಿಯಾಗಿದೆ ಎಂದಿದ್ದಾರೆ. ಜಿಎಸ್‌ಟಿ ಎಂಬುದು ಒಂದು ತೆರಿಗೆ, ಕನಿಷ್ಠ ತೆರಿಗೆ ಮತ್ತು ಸರಳ ತೆರಿಗೆ ಎಂಬ ಯುಪಿಎ ಸರ್ಕಾರದ ಪರಿಕಲ್ಪನೆಯಾಗಿತ್ತು. ಆದರೆ, ಎನ್‌ಡಿಎಯ ಜಿಎಸ್‌ಟಿ ಪರಿಕಲ್ಪನೆ ಪೂರ್ತಿಯಾಗಿ ಭಿನ್ನವಾಗಿದ್ದು, ಎರಡರಿಂದ ಮೂರು ಸ್ತರದ, ಶೇ 28ರ ವರೆಗಿನ ತೆರಿಗೆ ಒಳಗೊಂಡಿದೆ. ಇದು ಜಟಿಲವಾಗಿದ್ದು, ಅನೇಕರಿಗೆ ಸುಲಭದಲ್ಲಿ ಅರ್ಥವಾಗದು. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಜಿಎಎಸ್‌ಟಿ ಅಡಿಯಲ್ಲಿ ತೆರಿಗೆ ಸಲ್ಲಿಸಲು ಸಾಧ್ಯವಿಲ್ಲ. ಆದರೆ, ದೊಡ್ಡ ಕಂಪನಿಗಳು 5ರಿಂದ 15 ಖಾತೆಗಳನ್ನು ಹೊಂದುವ ಮೂಲಕ ಸುಲಭವಾಗಿ ತೆರಿಗೆ ಪಾವತಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಜಿಎಸ್‌ಟಿಯ ಫಲಿತಾಂಶವೆಂದರೆ, ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಮೊದಲ ಬಾರಿಗೆ ರಾಜ್ಯಗಳಿಗೆ ನೀಡಲಾಗುತ್ತಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಸೇರಿ ಇತರ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT