ನುಹ್ಹ್ (ಹರಿಯಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಪಾದಯಾತ್ರೆ ಬುಧವಾರ ಬೆಳಿಗ್ಗೆ ಹರಿಯಾಣ ಪ್ರವೇಶಿಸಿತು.
ರಾಜಸ್ಥಾನ ಗಡಿಯಲ್ಲಿರುವ ನುಹ್ಹ್ ಬಳಿ ಪಾದಯಾತ್ರೆ ಹರಿಯಾಣ ಪ್ರವೇಶಿಸಿತು. ಈ ವೇಳೆ ಹರಿಯಾಣದ ಕಾಂಗ್ರೆಸ್ ನಾಯಕರು ಸ್ಥಳದಲ್ಲಿ ಹಾಜರಿದ್ದು ಪಾದಯಾತ್ರೆ ಹಾಗೂ ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಹರಿಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ, ರಂದೀಪ್ ಸಿಂಗ್ ಸುರ್ಜೆವಾಲಾ, ದೀಪೇಂದ್ರ ಸಿಂಗ್ ಹೂಡಾ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಬಾನ್ ಹಾಜರಿದ್ದರು.
ಪಾದಯಾತ್ರೆಯು ಬಿಜೆಪಿ ಆಡಳಿತವಿರುವ ಹರಿಯಾಣಕ್ಕೆ ಎರಡು ಹಂತಗಳಲ್ಲಿ ಪ್ರವೇಶ ಮಾಡಲಿದೆ. ಇಂದು ಆಗಮಿಸಿದ ಪಾದಯಾತ್ರೆ ಡಿಸೆಂಬರ್ 23ರಂದು ರಾಜ್ಯದಿಂದ ಹೊರಹೋಗಿ ಮತ್ತೆ ಉತ್ತರ ಪ್ರದೇಶದಿಂದ ಬರುವಾಗ ಪಾಣಿಪತ್ ಮಾರ್ಗವಾಗಿ ಜನವರಿ 6ರಂದು ಮತ್ತೊಮ್ಮೆ ಹರಿಯಾಣ ಪ್ರವೇಶಿಸಲಿದೆ.
ಯಾತ್ರೆಯು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 15 ದಿನದಲ್ಲಿ 485 ಕಿಮೀ ಕ್ರಮಿಸಿತು.ಭಾರತ್ ಜೋಡೊ ಪಾದಯಾತ್ರೆ ಸೆಪ್ಟೆಂಬರ್ 7ರಿಂದ ಕನ್ಯಾಕುಮಾರಿಯಿಂದ ಆರಂಭವಾಗಿದೆ.