ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಖೀರ್ ಭವಾನಿ ದೇವಸ್ಥಾನ ಮತ್ತು ಇಲ್ಲಿನ ಹಜರತ್ಬಲ್ ಮಸೀದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭೇಟಿ ನೀಡಿದರು.
‘ಜಮ್ಮು–ಕಾಶ್ಮೀರಕ್ಕೆ ಎರಡು ದಿನದ ಪ್ರವಾಸಕ್ಕಾಗಿ ರಾಹುಲ್ ಗಾಂಧಿ ಅವರು ಸೋಮವಾರ ಇಲ್ಲಿಗೆ ಆಗಮಿಸಿದ್ದಾರೆ. ಕೇಂದ್ರ ಕಾಶ್ಮೀರದ ಚಿನಾರಸ್ನಲ್ಲಿರುವ ದೇವಸ್ಥಾನಕ್ಕೆ ಮಂಗಳವಾರ ಬೆಳಿಗ್ಗೆ ಅವರು ಭೇಟಿ ನೀಡಿದರು’ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.
ರಾಹುಲ್ ಗಾಂಧಿ ಅವರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಜಮ್ಮು–ಕಾಶ್ಮೀರದ ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಅವರು ಕೂಡ ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು.
‘ಇದು ವೈಯಕ್ತಿಕ ಭೇಟಿಯಾಗಿದ್ದು, ರಾಹುಲ್ ಅವರು ದೇವಸ್ಥಾನದಲ್ಲಿ ಅರ್ಧ ಗಂಟೆವರೆಗೆ ಇದ್ದರು. ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಮೀರ್ ಬಾಬಾ ಹೈದರ್ ಮಸೀದಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು’ ಎಂದು ಅವರು ಮಾಹಿತಿ ನೀಡಿದರು.
ಜಮ್ಮು–ಕಾಶ್ಮೀರದ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುಲಾಂ ಅಹಮದ್ ಮಿರ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಸೋಮವಾರ ಸಂಜೆ ಅವರು ಪಾಲ್ಗೊಂಡಿದ್ದರು.