ನವದೆಹಲಿ (ಪಿಟಿಐ): ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ‘ಭಾರತ್ ಜೋಡೊ’ ಯಾತ್ರೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಒಗ್ಗಟ್ಟಾಗಿದೆ. ಭಾರತ್ ಜೋಡೊ ಯಾತ್ರೆಯನ್ನು ಪೂರ್ಣವಾಗಿ ಯಶಸ್ಸುಗೊಳಿಸಲು ಗಮನವನ್ನು ಕೇಂದ್ರೀಕರಿಸಿದೆ‘ ಎಂದು ಪೈಲಟ್ ಹೇಳಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
‘ತಮ್ಮ ಮತ್ತು ಮುಖ್ಯಮಂತ್ರಿ ನಡುವಣ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿತ್ತು. ವಾಸ್ತವವಾಗಿ ಬಿಜೆಪಿಯಲ್ಲಿಯೇ ಸಾಕಷ್ಟು ಭಿನ್ನಮತವಿದೆ. ಆ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕನಿಷ್ಠ 12 ಜನ ಕಣ್ಣಿಟ್ಟಿದ್ದಾರೆ’ ಎಂದರು.
’ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರಬಲ ವಿರೋಧಪಕ್ಷವಾಗಲೂ ಬಿಜೆಪಿಗೆ ಸಾಧ್ಯವಾಗಿಲ್ಲ‘ ಎಂದು ಸಂದರ್ಶನದಲ್ಲಿ ಟೀಕಿಸಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಪೂರ್ಣ ಒಗ್ಗಟ್ಟಿದೆ. ಅದರ ಪೂರ್ಣ ಯಶಸ್ಸಿಗೆ ನಾವು ಸಜ್ಜಾಗಿದ್ದೇವೆ. ಒಂದು ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.