ನವದೆಹಲಿ: ಅಧಿವೇಶನದಲ್ಲಿ ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುಂಚಿತವಾಗಿ ವಿಡಿಯೊ ಸಂದೇಶವನ್ನು ಟ್ವೀಟ್ ಮಾಡಿರುವ ಅವರು, ಪಕ್ಷಗಳು ಸದನದಲ್ಲಿ ಚರ್ಚೆ ನಡೆಸಬೇಕು ಮತ್ತು ಕಲಾಪಗಳ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
‘ಇದು ಸಂಸತ್ತಿನ ಅತ್ಯಂತ ಪ್ರಮುಖ ಅಧಿವೇಶನವಾಗಿದೆ. ದೇಶದ ಜನರು ರಚನಾತ್ಮಕ ಕಲಾಪವನ್ನು ಬಯಸುತ್ತಾರೆ. ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇವೇಳೆ, ಕೊರೊನಾದ ಹೊಸ ರೂಪಾಂತರ ತಳಿ ಓಮಿಕ್ರಾನ್ ಬಗ್ಗೆ ಜಾಗೃತರಾಗಿರುವಂತೆ ದೇಶದ ಜನರಿಗೆ ಮೋದಿ ಸಲಹೆ ನೀಡಿದ್ದಾರೆ.