ಹಿಸುವಾ(ಬಿಹಾರ): ಬಿಹಾರದ ಸಸಾರಾಮ್ ಮತ್ತು ಬಿಹಾರ್ ಷರೀಫ್ ನಗರಗಳಲ್ಲಿ ಕೋಮು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ನಾವಡಾ ಜಿಲ್ಲೆಯ ಹಿಸುವಾದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು,‘2025ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನು ತಲೆಕೆಳಗಾಗಿ ನೇತುಹಾಕಲಾಗುವುದು’ ಎಂದು ಹೇಳಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 40 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಲು ಬಿಹಾರದ ಜನರು ನಿರ್ಧರಿಸಿದ್ದಾರೆ ಎಂದೂ ಆಶಯ ವ್ಯಕ್ತಪಡಿಸಿದರು.
‘ನರೇಂದ್ರ ಮೋದಿ ಅವರನ್ನು ಸತತ ಮೂರನೇ ಬಾರಿಯೂ ಪ್ರಧಾನಿಯಾಗಿಸಲು ದೇಶದ ಜನರು ನಿರ್ಧರಿಸಿದ್ದಾರೆ. ಹೀಗಾದರೆ ಪ್ರಧಾನಿ ಹುದ್ದೆಯನ್ನು ತೇಜಸ್ವಿ ಯಾದವ್ ಅವರಿಗೆ ಹಸ್ತಾಂತರಿಸುವ ತಮ್ಮ ಭರವಸೆಯಿಂದ ನಿತೀಶ್ ಕುಮಾರ್ ಅವರು ಹಿಂದೆ ಸರಿಯಬೇಕಾಗಬಹುದು. ಯಾಕೆಂದರೆ ನಿತೀಶ್ ಅವರ ಪ್ರಧಾನಿಯಾಗುವ ಕನಸು ಭಗ್ನವಾಗಲಿದೆ’ ಎಂದು ಲೇವಡಿ ಮಾಡಿದ್ದಾರೆ.
‘ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರು ಓಲೈಕೆಯ ರಾಜಕಾರಣ ಮಾಡಿದ್ದಾರೆ. ಅದು ಭಯೋತ್ಪಾದನೆ ಹೆಚ್ಚಾಗಲು ನೆರವಾಯಿತು. ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ’ ಎಂದರು.
‘ಬಿಜೆಪಿ ಎಂದಿಗೂ ನಿತೀಶ್ ಅವರೊಂದಿಗೆ ಕೈಜೋಡಿಸಲು ಸಾಧ್ಯವಿಲ್ಲ. ಅವರು ಜಾತೀಯತೆಯ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಅವರಿಗೆ ಬಿಜೆಪಿಯ ಬಾಗಿಲು ಎಂದಿಗೂ ಮುಚ್ಚಿರುತ್ತದೆ’ ಎಂದು ಪುನರುಚ್ಚರಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್, ಜೆಡಿಯು, ಆರ್ಜೆಡಿ ಮತ್ತು ಟಿಎಂಸಿ ವಿರೋಧಿಸಿತ್ತು. ಅಲ್ಲಿ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು ಎಂದೂ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.