ಅಹಮದಾಬಾದ್: ‘ದೇಶದ ಬಗ್ಗೆ ಜಾಗತಿಕವಾಗಿ ತಪ್ಪು ಮಾಹಿತಿಯನ್ನೆ ಪ್ರಚುರಪಡಿಸಲಾಗುತ್ತಿದೆ. ಈ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ, ಭಾರತದ ಬಗ್ಗೆ ವಾಸ್ತವ ಸಂಗತಿಗಳಿಂದ ಕೂಡಿದ ವಿವರಣೆ ನೀಡಲು ಸಂಘ ನಿರ್ಧರಿಸಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ತೇಯ ಹೊಸಬಾಳೆ ಭಾನುವಾರ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಆರ್ಎಸ್ಎಸ್ನ ಮೂರು ದಿನಗಳ ವಾರ್ಷಿಕ ಸಮಾವೇಶ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದ ಹಿನ್ನೆಲೆಯಲ್ಲಿರುವ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
'ಈ ಉದ್ದೇಶಕ್ಕಾಗಿ ಸಂಶೋಧಕರು, ಲೇಖಕರ ನೆರವು ಪಡೆಯಲಾಗುವುದು. ಭಾರತೀಯ ಸಮಾಜ, ಹಿಂದೂ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಜೀವನಶೈಲಿ ಕುರಿತು ಜಗತ್ತಿಗೆ ಹಾಗೂ ದೇಶೀಯವಾಗಿ ನೈಜಚಿತ್ರಣ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಮೂರು ದಿನಗಳ ಸಮಾವೇಶದಲ್ಲಿ ಚರ್ಚಿಸಲಾಗುವುದು’ ಎಂದೂ ಅವರು ಹೇಳಿದರು.
‘2025ರಲ್ಲಿ ಆರ್ಎಸ್ಎಸ್ಗೆ ಶತಮಾನೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಂಘದ ನೆಲೆಯನ್ನು ವಿಸ್ತರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಸಂಖ್ಯಾ ದೃಷ್ಟಿಯಿಂದ ಮಾತ್ರವಲ್ಲ, ರಾಷ್ಟ್ರೀಯತೆ ಹಾಗೂ ಏಕತೆಯಂತಹ ವಿಚಾರಗಳ ತಳಹದಿಯಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಲಾಗಿದೆ’ ಎಂದೂ ಹೇಳಿದರು.
ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಮಿತಿಯಾಗಿರುವ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಕಾರ್ಯಕ್ರಮದಲ್ಲಿ 1,252 ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.