ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಜೊತೆ ಭಾರತವು ಸಾಕಷ್ಟು ವಾಣಿಜ್ಯ ಸಂಬಂಧ ಹೊಂದಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ಯುದ್ಧವು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದರು.
‘ರಷ್ಯಾ–ಉಕ್ರೇನ್ ಸಂಘರ್ಷದಿಂದ ಭಾರತದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ’ ಎಂದು ಅವರು ಹೇಳಿದರು.
‘ಇಂಧನ ಹಾಗೂ ವಿವಿಧ ಸರಕುಗಳ ದರಗಳ ಮೇಲಿನ ಪರಿಣಾಮವನ್ನು ಕಾಣಬಹುದು. ಸಾಗಣೆ ಕ್ಷೇತ್ರದಲ್ಲಿ ಜಾಗತಿಕವಾಗಿ ಉಂಟಾಗಿರುವ ತೊಂದರೆ ಮತ್ತಷ್ಟೂ ಹೆಚ್ಚುವ ನಿರೀಕ್ಷೆ ಇದೆ’ ಎಂದು ಅವರು ಸದನಕ್ಕೆ ವಿವರಿಸಿದರು.
‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, ಭಾರತೀಯರನ್ನಲ್ಲದೇ, ಬಾಂಗ್ಲಾದೇಶ ಮತ್ತು ನೇಪಾಳ ಸೇರಿದಂತೆ 18 ರಾಷ್ಟ್ರಗಳ 147 ಪ್ರಜೆಗಳನ್ನು ಉಕ್ರೇನ್ನಿಂದ ತೆರವು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.