ನವದೆಹಲಿ:ಬಿಎಸ್ಪಿಯ ಆರು ಶಾಸಕರು ರಾಜಸ್ಥಾನದಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲೀನ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಮುಖಂಡರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 24ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ಧ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 24 ಕ್ಕೆ ಮುಂದೂಡಿದೆ. ಕೋವಿಡ್-19 ಕಾರಣದಿಂದಾಗಿ ರಾಜಸ್ಥಾನ ಹೈಕೋರ್ಟ್ ಅನ್ನು ಮೂರು ದಿನಗಳವರೆಗೆ ಮುಚ್ಚಲಾಗಿದೆ. ಹೀಗಾಗಿ ಮುಂದಿನ ವಾರವೇ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಬಿಜೆಪಿ ಶಾಸಕ ಮದನ್ ದಿಲಾವರ್ ಪರ ಹಿರಿಯ ವಕೀಲ ಸತ್ಯಪಾಲ್ ಜೈನ್ ಅವರು ನ್ಯಾಯಾಲಯವನ್ನು ಕೋರಿದ್ದರು.
ಇದಕ್ಕೂ ಮುನ್ನ, ‘ಈ ಪ್ರಕರಣವನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ’ ಎಂದು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮೂರ್ತಿ ಅವರಿದ್ದ ನ್ಯಾಯಪೀಠವು ತಿಳಿಸಿತ್ತು.
ಹೈಕೋರ್ಟ್ನ ಏಕಸದಸ್ಯ ಪೀಠವು ಈ ಹಿಂದೆ ಯಾವುದೇ ಮಧ್ಯಂತರ ಆದೇಶವನ್ನುನೀಡಿರಲಿಲ್ಲ ಮತ್ತು ಬಿಎಸ್ಪಿಯ ಆರು ಶಾಸಕರು ಕಾಂಗ್ರೆಸ್ ಶಾಸಕರಾಗಿ ಸದನದ ಕಲಾಪದಲ್ಲಿ ಭಾಗವಹಿಸುವಿಸುವುದನ್ನು ತಡೆಯಲು ನಿರಾಕರಿಸಿತ್ತು.
ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವಾನಾ ಮತ್ತು ರಾಜೇಂದ್ರ ಗುಧಾ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. ನಂತರ 2019ರ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
ಬಿಎಸ್ಪಿ ಶಾಸಕರ ವಿಲೀನಕ್ಕೆ 2019 ಸೆ.18ರಂದು ಅನುಮತಿ ನೀಡಿದ್ದ ವಿಧಾನಸಭೆ ಅಧ್ಯಕ್ಷ ಸಿಪಿ ಜೋಶಿ ಅವರ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಭಾಧ್ಯಕ್ಷ ಸಿ.ಪಿ.ಜೋಶಿ ಅವರ ಆದೇಶಕ್ಕೆ ತಡೆ ನೀಡಬೇಕು ಎಂದು ದಿಲಾವರ್ ಕೋರಿದ್ದರು.
ವಿಲೀನಕ್ಕೆ ಅನುಮತಿ ನೀಡಿದ್ದ ರಾಜಸ್ಥಾನದ ಸ್ಪೀಕರ್ ಸಿಪಿ ಜೋಶಿ ಅವರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯೂ ಕೂಡ ರಾಜಸ್ಥಾನ ಹೈಕೋರ್ಟ್ನ ಏಕಸದಸ್ಯ ಪೀಠದ ಮುಂದೆ ಬಾಕಿ ಉಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.