ನವದೆಹಲಿ: ಜಾಮೀನು ನೀಡಿದ ನಂತರವೂ ಸಂವಹನದ ವಿಳಂಬದಿಂದಾಗಿ ಜೈಲಿನಿಂದ ಕೈದಿಗಳ ಬಿಡುಗಡೆ ವಿಳಂಬವಾಗುವುದನ್ನು ತಡೆಯಲು ಕಾರಾಗೃಹಗಳಲ್ಲಿ ವೇಗದ ಅಂತರ್ಜಾಲ (ಇಂಟರ್ನೆಟ್) ಸೌಲಭ್ಯ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.
‘ಈ ನ್ಯಾಯಾಲಯದ ಜಾಮೀನು ಆದೇಶಗಳ ಹೊರತಾಗಿಯೂ ಸಂವಹನದ ವಿಳಂಬದಿಂದಾಗಿ ಬಿಡುಗಡೆಯಾಗದೇ ಜೈಲಿನಲ್ಲಿರುವ ಕೈದಿಗಳ ಬಗ್ಗೆ ನಮಗೆ ಕಾಳಜಿ ಇದೆ. ನ್ಯಾಯಾಲಯಗಳ ಆದೇಶವನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಳ್ಳಲು ಇದು ಸಕಾಲವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು ಗುರುವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತ ದೂರಿನ ವಿಚಾರಣೆಯನ್ನು ನಡೆಸಿತು. ಜೈಲಿನಲ್ಲಿ ಅಂತರ್ಜಾಲದ ಲಭ್ಯತೆಯ ಕುರಿತು 10 ರಾಜ್ಯಗಳು ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವು ಗಮನಿಸಿತು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳು ಅಂತರ್ಜಾಲ ಸೌಲಭ್ಯ ಇಲ್ಲದಿರುವ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿವೆ.
ಅಂತರ್ಜಾಲ ಲಭ್ಯವಿಲ್ಲದ ಜೈಲುಗಳಲ್ಲಿ ಸೌಲಭ್ಯ ಕಲ್ಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.