ನವದೆಹಲಿ: ಶಾಹೀನ್ಬಾಗ್ ಪ್ರತಿಭಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 7, 2020ರಲ್ಲಿ ನೀಡಿದ್ದ ತೀರ್ಪಿನ ಸ್ಪಷ್ಟೀಕರಣ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿತು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಶಾಹೀನಾಬಾಗ್ನಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಟನೆಗೆ ಸಂಬಂಧಿಸಿದ ಉಲ್ಲೇಖಿತ ತೀರ್ಪಿನಲ್ಲಿ, ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗದು ಎಂದೂ ಸುಪ್ರೀಂ ಕೋರ್ಟ್ ಘೋಷಿಸಿತ್ತು.
‘ಈ ವಿಷಯ ಮುಗಿದಿದೆ. ಈ ಅರ್ಜಿಯನ್ನು ಏಕೆ ಪಟ್ಟಿ ಮಾಡಲಾಗಿದೆ? ಏನು ಸ್ಪಷ್ಪೀಕರಣ ಕೇಳಿದ್ದಾರೆ? ನಮಗೆ ಅರ್ಥವಾಗುತ್ತಿಲ್ಲ. ಯಾವುದೇ ಸ್ಪಷ್ಟೀಕರಣ ಅಗತ್ಯವಿಲ್ಲ. ಸ್ಪಷ್ಟಿಕರಣ ಆದೇಶ ನೀಡಲಾಗದು’ ಎಂದು ಪೀಠವು ಹೇಳಿತು.