ನವದೆಹಲಿ: ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರುವ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕ ಮುಚ್ಚುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ವಿನೀತ್ ಸರನ್ ಹಾಗೂ ಅನಿರುದ್ಧ ಬೋಸ್ ಅವರಿರುವ ನ್ಯಾಯಪೀಠ ಈ ಸೂಚನೆ ನೀಡಿದ್ದು, ಎರಡು ವಾರಗಳ ಒಳಗಾಗಿ ಉತ್ತರಿಸುವಂತೆ ನಿರ್ದೇಶನ ನೀಡಿದೆ.
ಘಟಕ ಇರುವ ಸ್ಥಳದಲ್ಲಿ ಬಯೋ ಮಿಥೇನೇಷನ್ ಘಟಕ ಸ್ಥಾಪಿಸಲು ಹಾಗೂ ಈ ಸ್ಥಳವನ್ನೇ ಘನ ತ್ಯಾಜ್ಯ ಸಾಗಣೆಗೆ ಬಳಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ತೆಗೆದುಕೊಳ್ಳದ ಕಾರಣ, ಘಟಕವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿತ್ತು.
ಮೂರು ಶಾಲೆಗಳು ಹಾಗೂ ಒಂದು ಆಸ್ಪತ್ರೆ ಸಮೀಪದಲ್ಲಿಯೇ ಈ ಘಟಕ ಇದೆ. ಘಟಕವನ್ನು ಸ್ಥಳಾಂತರಿಸಿ, ಈ ಜಾಗವನ್ನು ಮೈದಾನವನ್ನಾಗಿ ಅಭಿವೃದ್ಧಿಪಡಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಕೋರಿ ಸ್ಥಳೀಯ ನಿವಾಸಿಗಳು ಸಹ ಹೈಕೋರ್ಟ್ ಮೆಟ್ಟಿಲೇರಿದ್ದರು.