ನವದೆಹಲಿ: ತುಮಕೂರಿನ ಮಾಜಿ ಮೇಯರ್, ನಗರಪಾಲಿಕೆ ಸದಸ್ಯ ಎಚ್.ರವಿಕುಮಾರ್ ಕೊಲೆ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೃತ್ಯ 2018ರಲ್ಲಿ ನಡೆದಿತ್ತು. ಮಹೇಶ್ ವಿ ಅಲಿಯಾಸ್ ಅಮಾಸೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಾಲ್ಕು ವಾರದಲ್ಲಿ ಉತ್ತರಿಸಲು ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ತಿಳಿಸಿದೆ.
ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 10, 2020ರಲ್ಲಿ ವಜಾ ಮಾಡಿತ್ತು. ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ವಕೀಲ ಕೆ.ವಿ.ಮುತ್ತುಕುಮಾರ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಇದೇ ಪ್ರಕರಣದಲ್ಲಿ ಇತರೆ ನಾಲ್ವರಿಗೆ ಜಾಮೀನು ನೀಡಲಾಗಿದೆ. ಮೊದಲ ಆರೋಪಿಗೆ ಕೊಲೆಯಾದ ವ್ಯಕ್ತಿ ಕುರಿತು ಮಾಹಿತಿ ನೀಡಿದ್ದು ಹೊರತುಪಡಿಸಿ ನನ್ನ ವಿರುದ್ಧಗುರುತರ ಆಪಾದನೆ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.