ನವದೆಹಲಿ:ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಕೊಲಿಜಿಯಂ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪಟ್ಟಿ ಮಾಡಲು ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಪುನಶ್ಚೇತನಗೊಳಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆ.ಬಿ.ಪಾರ್ಡಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ವಕೀಲ ಮ್ಯಾಥ್ಯೂಸ್ ಜೆ ನೆಡುಂಪಾರಾ ಈ ಮನವಿ ಪ್ರಸ್ತಾಪಿಸಿದರು.
ಎನ್ಜೆಎಸಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠದ (2015) ತೀರ್ಪನ್ನು ರಿಟ್ ಅರ್ಜಿ ಮೂಲಕ ಪರಿಶೀಲಿಸಬಹುದೇ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿ, ಈ ವಿಷಯ ಪಟ್ಟಿ ಮಾಡಲು ಒಪ್ಪಿಕೊಂಡಿತು.
ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಮೂಲಕ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಕೋರಿದ ಅರ್ಜಿದಾರರು, ಐವರು ನ್ಯಾಯಮೂರ್ತಿಗಳ ಪೀಠವು ಅಸಾಂವಿಧಾನಿಕವೆಂದು ಘೋಷಿಸಿದ ಎನ್ಜೆಎಸಿ ಮತ್ತು ಸಂವಿಧಾನ (ತೊಂಬತ್ತೊಂಬತ್ತನೇ ತಿದ್ದುಪಡಿ) ಕಾಯ್ದೆ, 2014 ಅನ್ನು ಪುನಶ್ಚೇತನಗೊಳಿಸುವಂತೆ ಕೋರಿದರು.
‘ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯು ಸ್ವಜನಪಕ್ಷಪಾತ ಮತ್ತು ಪಕ್ಷಪಾತಕ್ಕೆ ಸಮಾನಾರ್ಥಕವಾಗಿದೆ’ ಎಂದು ಘೋಷಿಸುವಂತೆ ನೆಡುಂಪಾರಾ ಮತ್ತು ಇತರರು ಅರ್ಜಿಯಲ್ಲಿ ಕೋರಿದ್ದಾರೆ. ಏಕೆಂದರೆ, ಇದು ಅರ್ಜಿದಾರರು ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ನ್ಯಾಯೋಚಿತ ಅವಕಾಶ ನಿರಾಕರಣೆಗೆ ಕಾರಣವಾಗಿದೆ.
ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷತೆ ವಹಿಸಲಿರುವ ಕೊಲಿಜಿಯಂನಲ್ಲಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳ ಪುತ್ರರು, ಸೋದರಳಿಯರಾಗಿರುವ ಮೂವರು ನ್ಯಾಯಮೂರ್ತಿಗಳು ಇರುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.