ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈವರೆಗೂ ಕೋವಿಡ್‌ ಎರಡನೇ ಅಲೆ: ವೈರಾಣು ತಜ್ಞ ಶಾಹಿದ್‌ ಜಮೀಲ್‌

Last Updated 12 ಮೇ 2021, 8:02 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌–19ರ ಎರಡನೇ ಅಲೆಯು ಏರುಗತಿಯನ್ನು ಮುಗಿಸಿದಂತೆ ಕಂಡುಬಂದರೂ, ಅದು ಕೆಳಗೆ ಇಳಿಯವುದಕ್ಕೆ ದೀರ್ಘ ಅವಧಿ ತೆಗೆದುಕೊಳ್ಳುತ್ತದೆ. ಬಹುಶಃ ಜುಲೈವರೆಗೂ ಮುಂದುವರೆಯಬಹುದು ಎಂದು ವೈರಾಣು ತಜ್ಞ ಶಾಹಿದ್‌ ಜಮೀಲ್‌ ಅಭಿಪ್ರಾಯಪಟ್ಟಿದ್ದಾರೆ.

‘ವೈರಸ್‌ನ ಹೊಸ ರೂಪಾಂತರಗಳಿಂದ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದ್ದರೂ, ರೂಪಾಂತರಿತ ವೈರಸ್‌ಗಳು ಹೆಚ್ಚು ಮಾರಕವಾಗಿವೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಅವರು ಹೇಳಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಮಂಗಳವಾರ ಸಂಜೆ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕೋವಿಡ್ ಅಲೆ ಉತ್ತುಂಗಕ್ಕೇರಿದೆ ಎಂದು ಈಗಲೇ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಕೋವಿಡ್‌–19ರ ಎರಡನೇ ಅಲೆಯು ಇಳಿದಂತೆ ತೋರುತ್ತಿದ್ದರೂ, ಅದು ದೀರ್ಘ ಪ್ರಕ್ರಿಯೆ ಆಗಿದೆ. ಬಹುಷಃ ಜುಲೈವರೆಗೂ ಈ ಇದು ನಡೆಯಬಹುದು. ಅಲೆಯು ಕ್ಷೀಣಿಸಲು ಆರಂಭಿಸಿದರೂ ಪ್ರತಿದಿನ ಹೆಚ್ಚಿನ ಸಂಖ್ಯೆಯ ಸೋಂಕಿತರವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

‘ಮೊದಲ ಅಲೆಯಲ್ಲಿ ನಾವು ಸ್ಥಿರವಾದ ಕುಸಿತವನ್ನು ಕಂಡಿದ್ದೇವೆ. ಆಗ ದಿನಕ್ಕೆ 96ರಿಂದ 97 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಎರಡನೇ ಅಲೆಯ ಈ ಸಂದರ್ಭದಲ್ಲಿ ನಿತ್ಯ ಸುಮಾರು 4 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಎರಡನೇ ಅಲೆಯ ಇಳಿಕೆ ಪ್ರಕ್ರಿಯೆ ದೀರ್ಘವಾಗಿರುತ್ತದೆ’ ಎಂದು ಅವರು ವಿವರಿಸಿದರು.

‘ಭಾರತದಲ್ಲಿ ಮರಣ ಮಾಹಿತಿಯನ್ನು ತಪ್ಪಾಗಿ ನೀಡಲಾಗುತ್ತಿದೆ. ಇಲ್ಲಿ ದತ್ತಾಂಶವನ್ನು ಸಂಗ್ರಹಿಸುವ ವಿಧಾನವೇ ದೋಷಯುಕ್ತವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಇಳಿಕೆಯ ಹಾದಿಯಲ್ಲಿತ್ತು. ಜನವರಿ ಮತ್ತು ಫೆಬ್ರುವರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿವಾಹ ಮಹೋತ್ಸವಗಳು, ಕಾರ್ಯಕ್ರಮಗಳು ಜರುಗಿದವು. ಇದು ಸೋಂಕು ಹರಡಲು ಕಾರಣವಾಯಿತು. ಜತೆಗೆ ದೇಶದ ವಿವಿಧೆಡೆ ನಡೆದ ಚುನಾವಣೆ, ರ್‍ಯಾಲಿ, ಧಾರ್ಮಿಕ ಸಮಾವೇಶಗಳು ಕೋವಿಡ್–19ರ ಎರಡನೇ ಅಲೆ ತೀವ್ರವಾಗುವಂತೆ ಮಾಡಿ, ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಅವರು ವಿವರಿಸಿದರು.

ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ಚುರುಕಾಗಿಸಬೇಕು. ಬಹುತೇಕರಿಗೆ ಲಸಿಕೆ ದೊರೆಯುವಂತಾಗಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT