ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಶುಕ್ರವಾರ ಮತ್ತುಶನಿವಾರ ಕಲ್ಲು ತೂರಾಟ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ಮುಂದಿನ ಆದೇಶದವರೆಗೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅಮರಾವತಿ ಪೊಲೀಸ್ ಆಯುಕ್ತ ಸಂದೀಪ್ ಪಾಟಿಲ್ ಶನಿವಾರ ತಿಳಿಸಿದ್ದಾರೆ.
ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಸಲುವಾಗಿ ಸಿಆರ್ಪಿಸಿ ಸೆಕ್ಷನ್ 144 (1), (2), (3) ಜಾರಿಗೊಳಿಸಲಾಗಿದೆ. ವೈದ್ಯಕೀಯ ತುರ್ತುಪರಿಸ್ಥಿತಿ ಹೊರತುಪಡಿಸಿ ಜನರು ಮನೆಗಳಿಂದ ಹೊರಗೆ ಬರಲು ಅವಕಾಶ ಇರುವುದಿಲ್ಲ. ಅದೇರೀತಿ, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ ಎಂದು ಸಂದೀಪ್ ತಿಳಿಸಿದ್ದಾರೆ.
ತ್ರಿಪುರದಲ್ಲಿ ನಡೆದ ಕೋಮುಗಲಭೆಯನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿದ್ದವು. ಇದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಶನಿವಾರ ಬಂದ್ಗೆ ಕರೆ ನೀಡಲಾಗಿತ್ತು. ಬಂದ್ ಸಂದರ್ಭ ನಗರದ ವಿವಿಧ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದು, ಹಲವು ಅಂಗಡಿಗಳಿಗೆ ಹಾನಿಯಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದರು.
ತ್ರಿಪುರದಲ್ಲಿಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯಿಸಿ ಮನವಿ ಸಲ್ಲಿಸಲು ಎಂಟು ಸಾವಿರಕ್ಕೂ ಹೆಚ್ಚು ಜನರುಅಮರಾವತಿಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಜಮಾಯಿದ್ದರು.ಮನವಿ ಸಲ್ಲಿಸಿ ವಾಪಸ್ ಆಗುವ ಸಂದರ್ಭದಲ್ಲಿ, ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ರಾಚೌಕ್ ಮತ್ತು ಕಾಟನ್ ಮಾರ್ಕೆಟ್ ನಡುವೆ ಮೂರು ಕಡೆ ಕಲ್ಲು ತೂರಾಟ ನಡೆದಿತ್ತು.