ಪುಣೆ: 'ಮಹಾ ವಿಕಾಸ್ ಅಗಾಡಿ (ಎಂವಿಎ) ನೇತೃತ್ವದ ಮಹಾರಾಷ್ಟ್ರ ಸರ್ಕಾರ ಚೆನ್ನಾಗಿ ನಡೆಯುತ್ತಿದ್ದು, ಐದು ವರ್ಷಗಳ ಅವಧಿ ಪೂರೈಸಲಿದೆ' ಎಂದು ಎನ್.ಸಿ.ಪಿ ನಾಯಕ ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಎಂವಿಎ ಸರ್ಕಾರ ರಚನೆಯಾಗಿದ್ದು ಸಾಮಾನ್ಯ ಕಾರ್ಯಕ್ರಮ ಎಂಬ ಅಜೆಂಡಾ ಅಡಿ. ಹೀಗಾಗಿ ಇದರ ಆಧಾರದ ಮೇಲೆ ಸರ್ಕಾರ ಸರಳವಾಗಿ ಮುನ್ನಡೆಯಲಿದೆ' ಎಂದು ಹೇಳಿದ್ದಾರೆ.
'ಸರ್ಕಾರ ನಡೆಸುವಾಗ ಕೆಲ ಸಲ ಸಣ್ಣಪುಟ್ಟ ಅಡಚಣೆಗಳು ಬರುತ್ತವೆ. ಅದನ್ನೆಲ್ಲ ನಿಭಾಯಿಸಲು ಮೈತ್ರಿಕೂಟದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರ ಸರ್ಕಾರ ಬೀಳುತ್ತದೆ ಎಂಬುದು ಕೇವಲ ಊಹಾಪೋಹ' ಎಂದು ಪವಾರ್ ಸ್ಪಷ್ಟಪಡಿಸಿದರು.
'ಪಕ್ಷ ಸಂಘಟನೆಯ ವಿಚಾರ ಬಂದಾಗ ಅವರದೇಯಾದ ಕಾರ್ಯಸಿದ್ದಾಂತಗಳನ್ನು ಪಕ್ಷಗಳು ಹೊಂದಿರುತ್ತವೆ. ಇದನ್ನು ಮೈತ್ರಿಕೂಟದ ಪಕ್ಷಗಳು ಪರಸ್ಪರ ಗೌರವಿಸುತ್ತಿವೆ. ಸರ್ಕಾರದ ನಡುವೆ ಅಡಚಣೆಗಳು ಬಂದರೆ ಉನ್ನತ ಮಟ್ಟದ ಸಮಿತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿದೆ' ಎಂದರು.
ಇತ್ತೀಚೆಗೆ ಎಂವಿಎ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವರದಿಗಳು ಬಂದಿವೆ. ಮುಂಬರುವ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು.