ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.
ತರೂರ್ ಟ್ವೀಟ್ ಗಮನಕ್ಕೆ ಬಂದ ಕೂಡಲೇ ಬಿಜೆಪಿ ನಾಯಕರು ಗಮನ ಸೆಳೆದಿದ್ದರು. ಮಹಾಜನ್ ಅವರು ಆರೋಗ್ಯದಿಂದ ಇದ್ದಾರೆ ಎಂದು ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಟ್ವೀಟ್ ಮಾಡಿದ್ದರು.
ತಕ್ಷಣ ಎಚ್ಚೆತ್ತುಕೊಂಡ ತರೂರ್, ಟ್ವೀಟ್ ಅಳಿಸಿ ಹಾಕಿದ್ದಾರೆ.
‘ಕೈಲಾಸ್ ವಿಜಯವರ್ಗೀಯ ಅವರಿಗೆ ಧನ್ಯವಾದಗಳು. ನಾನು ಟ್ವೀಟ್ ಅಳಿಸಿದ್ದೇನೆ. ಅಂತಹ ಸುಳ್ಳು ಸುದ್ದಿ ಸೃಷ್ಟಿಸಲು ಮತ್ತು ಹರಡಲು ಜನ ಯಾಕೆ ಪ್ರಚೋದನೆಗೊಳ್ಳುತ್ತಾರೆ ಎಂದು ಅಚ್ಚರಿಯಾಗುತ್ತಿದೆ. ಸುಮಿತ್ರಾ ಮಹಾಜನ್ ಅವರು ಆರೋಗ್ಯಯುತವಾದ ಸುದೀರ್ಘ ಜೀವನ ನಡೆಸಲಿ, ಶುಭ ಹಾರೈಕೆಗಳು’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
‘ಸುಮಿತ್ರಾ ಮಹಾಜನ್ ಅವರು ಚೆನ್ನಾಗಿದ್ದಾರೆಂದು ತಿಳಿದು ನಿರಾಳವಾಗಿದ್ದೇನೆ. ನನಗೆ ದೊರೆತ ಮಾಹಿತಿ ವಿಶ್ವಾಸಾರ್ಹ ಮೂಲದ್ದೆಂದು ತಿಳಿದುಕೊಂಡಿದ್ದೆ. ಅಂತಹ ಸುದ್ದಿಗಳನ್ನು ಹರಡುವ ಬಗ್ಗೆ ದಿಗಿಲುಗೊಂಡಿದ್ದೇನೆ’ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ, ಸುಮಿತ್ರಾ ಮಹಾಜನ್ ಪುತ್ರ ಮಂದಾರ್ ಅವರು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ, ತಾಯಿಯವರು ಆರೋಗ್ಯದಿಂದ ಇದ್ದಾರೆ. ಅವರ ಕುರಿತ ವದಂತಿಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.