ನವದೆಹಲಿ: ಆರ್ಥಿಕ ವ್ಯವಹಾರ, ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಚಿಂತನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೂರು ಪ್ರತ್ಯೇಕ ಸಮಿತಿ ರಚಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಮೂರೂ ಸಮಿತಿಗಳ ಭಾಗವಾಗಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್ ಅವರು ಆರ್ಥಿಕ ವ್ಯವಹಾರ ಕುರಿತ ಸಮಿತಿ ಸದಸ್ಯರಾಗಿದ್ದು, ಜೈರಾಂ ರಮೇಶ್ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರ ಸಮಿತಿಯಲ್ಲಿ ಆನಂದ್ ಶರ್ಮಾ, ಶಶಿ ತರೂರ್, ಸಪ್ತಗಿರಿ ಉಲಾಕ ಇದ್ದು, ಸಲ್ಮಾನ್ ಖುರ್ಷಿದ್ ಅವರು ಸಮಿತಿಯ ಸಂಚಾಲಕರಾಗಿರುತ್ತಾರೆ.
ಅಂತೆಯೇ, ರಾಷ್ಟ್ರೀಯ ಭದ್ರತೆ ಕುರಿತ ಸಮಿತಿಯಲ್ಲಿ ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿರುವ ಗುಲಾಂ ನಬಿ ಅಜಾದ್, ಮುಖಂಡರಾದ ವೀರಪ್ಪ ಮೊಯಿಲಿ, ಮತ್ತು ಶಶಿ ತರೂರ್ ಇದ್ದಾರೆ.ವಿನ್ಸೆಂಟ್ ಎಚ್.ಪಾಲಾ ಇದರ ಸಂಚಾಲಕರು.
‘ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷೆ ಈ ಸಮಿತಿಗಳನ್ನು ರಚಿಸಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಿತಿ ಸದಸ್ಯರಾಗಿರುವ ಪೈಕಿ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ವೀರಪ್ಪ ಮೊಯಿಲಿ, ಶಶಿ ತರೂರ್ ಅವರು ಈ ಹಿಂದೆ ಪಕ್ಷದ ಸಾಂಸ್ಥಿಕ ಸಂಘಟನೆಯ ಬದಲಾವಣೆ ಕೋರಿ ಪತ್ರವನ್ನು ಬರೆದಿದ್ದ 23 ಜನರಲ್ಲಿ ಇದ್ದರು.