ರಾಮೇಶ್ವರಂ(ತಮಿಳುನಾಡು): ಅಕ್ರಮವಾಗಿ ತಮ್ಮ ದೇಶದ ಜಲ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ 20 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಅವರಿಂದ ಎರಡು ದೋಣಿಗಳನ್ನು ವಶಕ್ಕೆ ಪಡೆದಿದೆ.
ರಾಮೇಶ್ವರಂ ಮತ್ತು ತಂಗಚಿಮಡಂ ಮೂಲದ ಮೀನುಗಾರರನ್ನು ಬುಧವಾರ ರಾತ್ರಿ ಕಚ್ಚತೀವು ಬಳಿ ಶ್ರೀಲಂಕಾ ನೌಕಾಪಡೆಯವರು ವಶಕ್ಕೆ ಪಡೆದಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವ ಮೀನುಗಾರರನ್ನು ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ನೌಕಾಪಡೆಯ ಶಿಬಿರಕ್ಕೆ ಕರೆದೊಯ್ದಿದ್ದು, ಅವರನ್ನು ಶ್ರೀಲಂಕಾದ ಮೀನುಗಾರಿಕೆ ಅಧಿಕಾರಿಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮೀನುಗಾರರನ್ನು ಬಂಧಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಮೀನುಗಾರ ಸಂಘದ ಪ್ರತಿನಿಧಿಗಳು, ‘ಬಂಧಿತ ಮೀನುಗಾರರನ್ನು ಬಿಡುಗಡೆ ಮಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.